Saturday, July 30, 2016

ಅಣ್ಣಾ ಮಲೈ ಎಂಬ ದಕ್ಷ ಪೋಲಿಸ್ ಅಧಿಕಾರಿ

'ಅಣ್ಣಾ ಮಲೈ' , ಇದು ಉಡುಪಿ ಜಿಲ್ಲೆಯ ನಿವಾಸಿಗಳಿಗೆ ಚಿರಪರಿತವಾದ ಹೆಸರು. ೨೦೧೫ರ ಜನವರಿ ೧ರಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ೨೦೧೧ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಈ ಅಣ್ಣಾ ಮಲೈ. ಕೇವಲ ಒಂದೂವರೆ ವರ್ಷದ ಅಲ್ಪಾವಧಿಯಲ್ಲಿ ಜನಮಾನಸದಲ್ಲಿ ನಿಲ್ಲುವಂತಹ ರೀತಿಯಲ್ಲಿ ಅಧಿಕಾರ ನಿರ್ವಹಿಸಿದ ಇವರು ಇಂದು ಯುವಜನರ ಪಾಲಿಗೆ 'ಹೀರೋ' ಆಗಿದ್ದರೆ ಅದಕ್ಕೆ ಕಾರಣ ಅವರ ನಿಷ್ಪಕ್ಷಪಾತವಾದ ಅಧಿಕಾರ ನಿರ್ವಹಣೆ ಮತ್ತು ಜನಪರ ಕಾಳಜಿ. ತಮ್ಮ ಅಧಿಕಾರದ ಅವಧಿಯಲ್ಲಿ ಕಳಂಕ ರಹಿತರಾಗಿದ್ದ ಅವರು ಇತ್ತೀಚೆಗೆ ಚಿಕ್ಕಮಗಳೂರಿಗೆ ವರ್ಗಗೊಂಡಿರುವುದು ಆ ಜಿಲ್ಲೆಯ ಜನರ ಅದೃಷ್ಟ ಎನ್ನಬಹುದು. ಸಾಮಾನ್ಯವಾಗಿ ಜನರು ಪೋಲಿಸ್ ಇಲಾಖೆಯನ್ನು ತಾತ್ಸಾರ ಭಾವನೆಯಿಂದ ನೋಡುವುದೇ ಜಾಸ್ತಿ. ಇದಕ್ಕೆ ಕಾರಣ ಅಲ್ಲಿರುವ ಭ್ರಷ್ಟಾಚಾರ ಮತ್ತು ರಾಜಕೀಯ ನಾಯಕರ ಅಣತಿಯಂತೆ ನಡೆಯಬೇಕಾದ ಪರಿಸ್ಥಿತಿ (ಅನಿವಾರ್ಯತೆ ?). ನಾನು ಕಂಡಂತೆ ಅಣ್ಣಾ ಮಲೈ ಜನಪ್ರಿಯತೆಗೆ ಕಾರಣ ಅವರು ಇವೆರಡೂ ತಮ್ಮ ಬಳಿ ಸುಳಿಯದಂತೆ ಎಚ್ಚರವಹಿಸಿರುವುದು. ಜೊತೆಗೆ ಅವರು ಕಾನೂನನ್ನು ಜನರ ಮೇಲೆ ಹೇರುವುದರ ಬದಲು ಕಾನೂನು ಪಾಲನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಅದರಲ್ಲೂ ಮುಖ್ಯವಾಗಿ ಮಾದಕ ವಸ್ತುಗಳ ಬಳಕೆ ಮತ್ತು ಅಜಾಗರೂಕತೆಯ ವಾಹನ ಸವಾರಿ ಯಾವ ರೀತಿ ನಮ್ಮನ್ನು ಬಲಿತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಿರುವುದು ಅವರ ಬಹಳ ದೊಡ್ಡ ಸಾಧನೆ. ಇದರೊಂದಿಗೆ ಅವರ ಆರೋಗ್ಯ ಮತ್ತು ಪರಿಸರ ಕಾಳಜಿ ಕೂಡ ಪ್ರಶಂಸನೀಯ. ಕಾಲೇಜು ವಿದ್ಯಾರ್ಥಿಗಳನ್ನು ಸೈಕಲ್ ಬಳಸುವಂತೆ ಹೇಳಿದರಲ್ಲದೆ ತಾವೇ ಸ್ವತಹ ಬಳಸಿ ಮಾದರಿಯಾದರು. ಇನ್ನು ಅಪಘಾತ ಅಥವಾ ಅವಘಡಗಳ ಸಂದರ್ಭದಲ್ಲಿ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮಾನವೀಯತೆಯ ಚೌಕಟ್ಟಿನಲ್ಲಿ ಅವರು ನಿರ್ವಹಿಸಿದ ರೀತಿ ಮುಂದಿನ ಅಧಿಕಾರಿಗಳಿಗೆ ಅನುಸರಣೀಯ. ಒಟ್ಟಿನಲ್ಲಿ ಹೇಳುವುದಾದರೆ ಅಣ್ಣಾ ಮಲೈಯವರು ತಮ್ಮ ಅಧಿಕಾರದ ಅವಧಿಯಲ್ಲಿ ಉಡುಪಿ ನಿವಾಸಿಗಳಲ್ಲಿ ಸುರಕ್ಷತೆಯ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

No comments:

Post a Comment