Monday, June 25, 2012

ಸರ್ವೇಜನಾಃ ಸುಖಿನೋ ಭವಂತು ಎಂದರೆ ಕೇಸರೀಕರಣವೇ?

ಕೆಲವು ದಿನಗಳಿಂದ ಉದಯವಾಣಿ ಪತ್ರಿಕೆಯಲ್ಲಿ ಬರುತ್ತಿರುವ ’ಕೇಸರಿ ಕಲಹ’ದಲ್ಲಿ ಗಣ್ಯರ ಅಭಿಪ್ರಾಯಗಳನ್ನು ಓದಿದಾಗ ಪ್ರತಿಕ್ರಿಯಿಸಬೇಕು ಎಂದೆನಿಸಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜಾತಿ ಮತ್ತು ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಿ ನೋಡಿದ ಉದಾಹರಣೆಗಳು ಬಹಳ ಕಡಿಮೆ. ಇದರ ಭಾಗವೇ ಕೇಸರೀಕರಣದ ಪರ ಮತ್ತು ವಿರೋಧ ಚರ್ಚೆ. ಈ ನಿಟ್ಟಿನಲ್ಲಿ ನಾನು ಕೆಲವೊಂದು ಪ್ರಶ್ನೆಗಳನ್ನು ನಮ್ಮ ರಾಜಕಾರಣೆಗಳಿಗೆ ಕೇಳಬಯಸುತ್ತೇನೆ.
·    ಮೊದಲನೆಯದಾಗಿ, ಹಸಿರು ಎಂದರೆ ಗಿಡ, ಮರ, ಪರಿಸರವನ್ನು ನೆನಪಿಸಿಕೊಳ್ಳುವ ನೀವು ಕೇಸರಿ ಎಂದಾಕ್ಷಣ ಸಂಕುಚಿತ ಮನೋಭಾವದವರಾಗುವುದೇಕೆ ಮತ್ತು ಪೂರ್ವಾಗ್ರಹ ಪೀಡಿತರಂತೆ ವರ್ತಿಸುವುದೇಕೆ? ಅಷ್ಟಕ್ಕೂ ಕೇಸರಿಗೆ ಕೇವಲ ಧರ್ಮವೊಂದನ್ನು ಹೊಂದಿಸಿ ನೋಡುವ ನಿಮ್ಮ ಮನೋಧರ್ಮ ಸರಿಯೇ?
·      ಸರ್ವೇಜನಾಃ ಸುಖಿನೋ ಭವಂತು ಮತ್ತು ವಸುಧೈವ ಕುಟುಂಬಕಂ ಎಂಬ ಉಕ್ತಿಗಳ ಅರ್ಥವಾದರೂ ನಿಮಗೆ ತಿಳಿದಿದೆಯೇ? ಸಮಸ್ತರಿಗೆ ಸುಖ ಮತ್ತು ಶಾಂತಿ ಸಿಗಲಿ ಎಂಬುದು ನಿಮ್ಮ ಪ್ರಕಾರ ಸಂಕುಚಿತ ಮನಸ್ಥಿತಿಯಾದರೆ, ವಿಶಾಲ ಮನಸ್ಸು ಎಂದರೆ ಏನು ಎಂದು ತಿಳಿಸುವಿರಾ?
· ಸಮಾನತೆಯೇ ನಿಮ್ಮ ಗುರಿಯಾದರೆ ಜಾತಿ ಮತ್ತು ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುತ್ತಿರುವುದೇಕೆ? ಅಲ್ಪಸಂಖ್ಯಾತರೆಂದು ಕೆಲವು ವರ್ಗಕ್ಕೆ ವಿಶೇಷ ಸೌಲಭ್ಯ ನೀಡುವುದು ಸರಿಯೇ?
·  ಸಮಾಜದ ಒಂದು ವರ್ಗಕ್ಕೆ ನೋವಾಗುತ್ತದೆ ಎಂದು ಐತಿಹಾಸಿಕ ಸತ್ಯಗಳನ್ನೇ ತಿರುಚುವುದು ಸರಿಯೇ?
ನಮ್ಮಲ್ಲಿನ ಎಲ್ಲಾ ರಾಜಕೀಯ ಪಕ್ಷಗಳೂ ಜಾತಿ ಮತ್ತು ಧರ್ಮವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿವೆಯೇ ಹೊರತು ಅವರ ಮೇಲಿನ ನೈಜ ಕಾಳಜಿಯಿಂದಲ್ಲ. ಸಮಾಜದಲ್ಲಿ ಒಡಕು ಮೂಡಿಸುವ ಮೂಲಕ ತಮ್ಮ ಕಾರ್ಯ ಸಾಧಿಸುವ ರಾಜಕಾರಣಿಗಳ ಆಟವನ್ನು ತಿಳಿಯದಷ್ಟು ದಡ್ಡರಲ್ಲ ನಮ್ಮ ಜನ.

Sunday, June 24, 2012

ರಾಜಕೀಯ


ಕಾನೂನು ಸಚಿವ ಸುರೇಶ್ ಕುಮಾರ್ ಮೇಲಿನ ಆರೋಪ ಮತ್ತು ಅವರ ರಾಜೀನಾಮೆ ಕರ್ನಾಟಕ ರಾಜಕೀಯದಲ್ಲಿ ಒಂದು ಕಪ್ಪು ಚುಕ್ಕೆ.
ಗಂಧದ ಗುಡಿ, ಶಿಲ್ಪಕಲೆಯ ತವರೂರು ಎಂಬೆಲ್ಲಾ ವಿಶೇಷಣಗಳಿಂದ ಕರೆಸಿಕೊಳ್ಳುತ್ತಿದ್ದ ನಮ್ಮ ನಾಡು ಇಂದು ರಾಜಕೀಯ ಗೊಂದಲಗಳ ಗೂಡು. ಕಳೆದ ಒಂದೆರಡು ವರ್ಷಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳಾದುದನ್ನು ನಾವು ಕಂಡಿದ್ದೇವೆ. ಈ ಬದಲಾವಣೆಗಳು ನಮ್ಮ ಹಿರಿಯರು ರಾಜ್ಯಕ್ಕೆ ತಂದು ಕೊಟ್ಟ ಎಲ್ಲಾ ಗೌರವವನ್ನು ಮಣ್ಣುಪಾಲಾಗಿಸಿದೆ. ಗಣಿಯ ಧೂಳು ಎಷ್ಟು ತೊಳೆದರೂ ಹೋಗುತ್ತಿಲ್ಲ. ಮಕ್ಕಳಿಗೆ ಸಿಹಿತಿಂಡಿ ಹಂಚಿದಂತೆ ರಾಜಕಾರಣಿಗಳಿಗೆ ಸೈಟ್ ಹಂಚಿಕೆಯಾಗಿದೆ. ದಿನಾಲು ಹಗರಣಗಳು ಟಿವಿ ಧಾರಾವಾಹಿಯಂತೆ ಹೊರಗೆ ಬರುತ್ತಿದೆ. ಆದರೆ ಈಗ ಕೇಳಿಬರುತ್ತಿರುವ ಹೆಸರು ಬಿಜೆಪಿಯ ಕೆಲವೇ ಪ್ರಾಮಾಣಿಕ ಸಚಿವರಲ್ಲಿ ಒಬ್ಬರಾದ ಸುರೇಶ್ ಕುಮಾರ್. ಇವರು ಪ್ರಾಮಾಣಿಕರು ಎಂಬ ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಕಂಡಾಗ ಈ ಆರೋಪ ಉಳಿದ ಸಚಿವರ ಮೇಲಿನ ಆರೋಪಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಈಗಲೇ ಸುರೇಶ್ ಕುಮಾರ್ ಯಾವುದೇ ಅಕ್ರಮ ಎಸಗಿಲ್ಲ ಎಂಬ ತೀರ್ಮಾನಕ್ಕೆ ಬರುವುದು ಅವಸರದ ಕ್ರಮ. ಆದರೆ ಒಂದು ವೇಳೆ ಅವರು ಪ್ರಾಮಾಣಿಕರೇ ಆಗಿದ್ದಲ್ಲಿ ಅವರ ರಾಜೀನಾಮೆ ಕರ್ನಾಟಕದ ಜನತೆಗೆ ಆದ ನಷ್ಟ ಎಂದೆನಿಸುತ್ತದೆ. ಆದುದರಿಂದ ತಾನು ಪ್ರಾಮಾಣಿಕ ಎಂಬ ಆತ್ಮಸ್ಥೈರ್ಯ ಅವರಲ್ಲಿ ಇದ್ದರೆ ಸುಳ್ಳು ಆರೋಪಗಳಿಗೆ ಅವರು ಅಂಜಬೇಕಾಗಿಲ್ಲ ಮತ್ತು ಅವರು ಅಧಿಕಾರದಲ್ಲಿ ಮುಂದುವರಿಯಲು ಅರ್ಹರು. ಅಲ್ಲದೆ ದಕ್ಷ ಮತ್ತು ಪ್ರಾಮಾಣಿಕ  ರಾಜಕಾರಣಿಗಳ ಸೇವೆ ನಮಗೆ ಅಗತ್ಯ ಕೂಡ.