Saturday, November 5, 2016

ಪಂಕ್ತಿ ಬೇಧ

ಇತ್ತೀಚೆಗೆ ಭೋಜನದಲ್ಲಿ ಪಂಕ್ತಿ ಬೇಧದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದ್ದು, ಪರ ಮತ್ತು ವಿರೋಧಿ ಬಣಗಳು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳುತ್ತಿವೆ. ಆಧುನಿಕ ಸಮಾಜದಲ್ಲಿ ಅಸಮಾನತೆಯನ್ನು ಸಹಿಸಲು ಸಾಧ್ಯವಿಲ್ಲ. ಆದುದರಿಂದ ಜಾತಿಯಾಧಾರಿತವಾಗಿ ಯಾವುದೇ ವ್ಯಕ್ತಿಯನ್ನು ಉನ್ನತ ಅಥವಾ ನೀಚ ಎಂದು ನಿರ್ಧರಿಸುವುದು ಖಂಡಿತಾ ತಪ್ಪು ಮತ್ತು ಯಾವುದೇ ರೀತಿಯ ಸಾಂಪ್ರದಾಯಿಕ ವಿವರಣೆಗಳನ್ನು ಒಪ್ಪಲಾಗದು. ಆದುದರಿಂದ ಸಮಾನತೆಗಾಗಿನ ಹೋರಾಟ ಸರಿಯಾಗಿದೆ. ಆದರೆ ಇತ್ತೀಚಿನ ಕೆಲವು ಘಟನಾವಳಿಗಳು ಸಮಾನತೆಯಾಚೆಗಿನ ಉದ್ದೇಶಗಳೊಂದಿಗೆ ಈ ಹೋರಾಟ ನಡೆಯುತ್ತಿದೆಯೋ ಎಂಬ ಸಂಶಯವನ್ನು ಹುಟ್ಟುಹಾಕಿದೆ. ಏಕೆಂದರೆ ಹೋರಾಟದ ಮುಂಚೂಣೆಯಲ್ಲಿರುವವರಿಗೆ ನೊಂದವರ ಬಗೆಗಿನ ಕಾಳಜಿಗಿಂತ ರಾಜಕೀಯ ಲಾಭವೇ ಮುಖ್ಯವಾಗಿಬಿಟ್ಟಿದೆ. ಅಲ್ಲದೆ ಸಮಾನತೆ ಮತ್ತು ಆದಿವಾಸಿ ಜನರ ಪರವಾಗಿ ದುಡಿಯುತ್ತಿರುವ ಕೆಲವು ಸಂಘಟನೆಗಳನ್ನು ಈ ಹೋರಾಟಗಾರರು ವಿರೋಧಿಸುತ್ತಿರುವುದು ಏಕೆ ಎಂಬುದು ಉತ್ತರವಿಲ್ಲದ ಪ್ರಶ್ನೆಯಾಗಿ ಉಳಿದಿದೆ. ಜಾತಿಯಾಧಾರಿತ ಭೋಜನ ಪಂಕ್ತಿಯನ್ನು ವಿರೋಧಿಸುವ ಮಂದಿ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಜಾತಿಯಾಧಾರಿತ ಮೀಸಲಾತಿಯನ್ನು ಸಮರ್ಥಿಸುವುದನ್ನು ಅರ್ಥೈಸಲು ಸಾಧ್ಯವಾಗುತ್ತಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಈ ಹೋರಾಟ ರಾಜಕೀಯ ಅಸ್ಥಿತ್ವಕ್ಕಾಗಿ ಕೆಲವು ನಾಯಕರು ನಡೆಸುವ ನಾಟಕದಂತೆ ಭಾಸವಾಗುತ್ತದೆ. ಸಮಾನತೆಯ ಬಗ್ಗೆ ಇರುವ ಕಾಳಜಿ ನೈಜವಾಗಿದ್ದಲ್ಲಿ ಈ ನಾಯಕರು ಕನಿಷ್ಟ ಪಕ್ಷ ಜಾತಿಯಾಧಾರಿತ ಮೀಸಲಾತಿಯನ್ನು ಒಂದು ತಲೆಮಾರಿಗೆ ಸೀಮಿತಗೊಳಿಸುವ ಬಗ್ಗೆಯಾದರೂ ಆಲೋಚಿಸುವುದು ಸೂಕ್ತ. ಆಗ ಮೀಸಲಾತಿ ಸೌಲಭ್ಯವು ಅರ್ಹರಿಗೆ ತಲುಪುವಂತಾಗುತ್ತದೆ. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಜಾತಿಯ ಜನರನ್ನು ಮೀಸಲಾತಿಯ ಅಡಿಯಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಸಮಾಜ ಮತ್ತು ಸರಕಾರದಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ ನಡೆಸುವವರನ್ನು ನಾವು ಬೆಂಬಲಿಸೋಣ. ಪಂಕ್ತಿ ಬೇಧದ ವಿರುದ್ಧದ ಹೋರಾಟ ಕೇವಲ ಭೋಜನಕ್ಕಷ್ಟೇ ಸೀಮಿತವಾಗದೆ ಉದ್ಯೋಗ ಮತ್ತು ಶಿಕ್ಷಣದಂತಹ ಕ್ಷೇತ್ರದಲ್ಲೂ ನಡೆಯಲಿ.