Monday, July 11, 2016

ಸತ್ಯದ ಸಮಾಧಿಯಾಗದಿರಲಿ



ನಾಡೆಂಬ ದೇಹಕ್ಕೆ ರೂಢಿಪತಿಯೇ ಪ್ರಾಣ,
ನಾಡಳಿಯೆ ರೂಢಿಪತಿ ಕೆಡುಗು,  
ಅರಸಳಿಯೆ ನಾಡೆಲ್ಲ ಕೆಡುಗು ಸರ್ವಜ್ಞ
ಯಾಕೋ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಅನಪೇಕ್ಷಿತ ವಿಷಯಗಳಿಂದಾಗಿ ಸುದ್ದಿಯಾಗುತ್ತಿರುವಾಗ ಈ ವಚನ ನೆನಪಾಯಿತು. ರಾಜಾಡಳಿತವಾಗಲಿ ಅಥವಾ ಪ್ರಜಾಪ್ರಭುತ್ವವಾಗಲಿ, ಸರ್ವಜ್ಞನ ಈ ಮಾತು ಎರಡಕ್ಕೂ ಸರಿ ಎನಿಸುತ್ತದೆ. ಪ್ರಜೆಗಳ ಯೋಗಕ್ಷೇಮವೇ ರಾಜನ ಮೊದಲ ಆಧ್ಯತೆ. ಪ್ರಜಾ ಪರಿಪಾಲನೆಗಾಗಿ ರಾಜನು ಮಾಡಿಕೊಂಡ ವ್ಯವಸ್ಥೆಯೇ ಅಧಿಕಾರಿ ವರ್ಗ. ಆದರೆ ಹೊಲದ ರಕ್ಷಣೆಗಾಗಿ ಹಾಕಿದ ಬೇಲಿಯೇ ರಕ್ಷಣೆಗೆ ಮೊರೆಯಿಡುವಂತಾದರೆ? ಇದು ನಮ್ಮ ಇಂದಿನ ಸ್ಥಿತಿ. ಯಾರೋ ಒಬ್ಬ ಅಧಿಕಾರಿ ಈ ಪರಿಸ್ಥಿತಿಗೆ ಬಂದಿದ್ದರೆ ಆತನ ತಪ್ಪಿರಬಹುದೇನೋ ಎಂದು ಭಾವಿಸಿ ಸುಮ್ಮನಿರಬಹುದು. ಆದರೆ ತಿಂಗಳ ಅಂತರದಲ್ಲಿ ಕೆಲವು ಅಧಿಕಾರಿಗಳಲ್ಲಿ ತಾವು ತಮ್ಮ ಹುದ್ದೆಗೆ ನ್ಯಾಯ ಒದಗಿಸುತ್ತಿಲ್ಲ ಅಥವಾ ತಮಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯಕ್ಕೆ ಬಂದರೆ? ಯೋಚಿಸಬೇಕು. ರಾಜಧರ್ಮದ ಪಾಲನೆಯಾಗುವಂತೆ ನೋಡಿಕೊಳ್ಳುವುದು ಮತ್ತು ಅದಕ್ಕೆ ತೊಂದರೆಯಾದರೆ ಪ್ರತಿಭಟಿಸುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಾದ ನಮ್ಮ ಕರ್ತವ್ಯ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ನಮ್ಮ ರಾಜ್ಯ ಸರಕಾರ ಅಧಿಕಾರಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ. ಪ್ರತಿ ಅಧಿಕಾರಿ ಸಿಡಿದಾಗಲೂ ಆತನ/ಆಕೆಯ ಚಾರಿತ್ಯಹರಣ, ಆತನ/ಆಕೆಯ ಮೇಲೆ ಸುಳ್ಳು ಆಪಾಧನೆ, ಆತನ/ಆಕೆಯ ಕೌಟುಂಬಿಕ ಹಿನ್ನಲೆ ಇತ್ಯಾದಿಗಳ ಮೂಲಕ ಜನರನ್ನು ಹಾಗೆಯೇ ಘಟನಾ ಸಂಬಂಧಿ ತನಿಖೆಯನ್ನು ಹಾದಿ ತಪ್ಪಿಸುವ ಕೆಲಸ ನಮ್ಮ ಮಾನ್ಯ ಮುಖ್ಯಮಂತ್ರಿಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿದೆ. ತಮ್ಮ ಹಾಗೂ ತಮ್ಮ ಸಂಗಡಿಗರ ರಕ್ಷಣೆಗಾಗಿ ಮಾನ್ಯರು ಮಾಡುತ್ತಿರುವ ಈ ಎಲ್ಲಾ ಕಸರತ್ತುಗಳನ್ನು ಅರಿಯದಷ್ಟು ದಡ್ಡರಲ್ಲ ಕರ್ನಾಟಕದ ಜನತೆ. ಶ್ರೀ ಡಿ. ಕೆ. ರವಿಯವರಿಂದ ಹಿಡಿದು ಶ್ರೀ ಗಣಪತಿಯವರ ಪ್ರಕರಣದವರೆಗೂ ಸರಕಾರದ ಪ್ರತಿಕ್ರಿಯೆ ಒಂದೇ ರೀತಿಯಾಗಿದೆ. ತನ್ನ ಅಧಿಕಾರಿಗಳ ಹಿತ ಕಾಪಾಡದ ಸರಕಾರದಿಂದ ಜನಹಿತದ ನಿರೀಕ್ಷೆ ಮಾಡುವುದು ಎಷ್ಟು ಸಾಧ್ಯ? ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಜನ ಧಂಗೆ ಏಳುವುದನ್ನು ತಳ್ಳಿಹಾಕುವ ಹಾಗಿಲ್ಲ. ಆದುದರಿಂದ ಇಂತಹ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತವಾಗಿ ತನಿಖೆಯನ್ನು ನಡೆಸಬೇಕಿದೆ. ಇಂತಹ ಕ್ರಮಗಳು ಮಾತ್ರ ನೊಂದ ಕುಟುಂಬಗಳ ನೋವನ್ನು ಕಡಿಮೆಗೊಳಿಸಬಹುದು ಮತ್ತು ಕಳೆದು ಹೋದ ಜನರ ವಿಶ್ವಾಸವನ್ನು ಮರಳಿ ಗಳಿಸಿಕೊಡಬಹುದು. ಸತ್ತವರೊಂದಿಗೆ ಸತ್ಯದ ಸಮಾಧಿಯಾಗದಿರಲಿ ಎಂಬುದೇ ನನ್ನ ಕಳಕಳಿ.
(ದಿನಾಂಕ ೧೪.೦೭.೨೦೧೬ರ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)

No comments:

Post a Comment