Friday, June 21, 2013

ಜಾತಿ, ಧರ್ಮ ಮತ್ತು ರಾಜಕೀಯ

ಬಾಲ್ಯದಿಂದಲೂ ನನ್ನಲ್ಲಿ ಗೊಂದಲ ಮೂಡಿಸಿದ ಪದ ’ಜಾತ್ಯಾತೀತತೆ’ ಅಥವಾ secularism. ಪ್ರಾಥಮಿಕ ಶಾಲಾ ಹಂತದಲ್ಲಿ ನಾವು ಗುರುಗಳಿಂದ ತಿಳಿದ ಪ್ರಕಾರ ಜಾತಿಯನ್ನು ಮೀರಿದ ಸಮಾಜ ಅಥವಾ ರಾಷ್ಟ್ರವನ್ನು ಜಾತ್ಯಾತೀತ ಸಮಾಜ ಅಥವಾ ರಾಷ್ಟ್ರ ಎನ್ನುತ್ತೇವೆ. ಅಂದರೆ ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ, ಹೀಗೆ ಎಲ್ಲಾ ಕ್ಷೇತ್ರಗಳನ್ನೂ ಜಾತಿ ವ್ಯವಸ್ಥೆಯಿಂದ ಹೊರಗಿಡುವುದು ಎಂದರ್ಥ. ವಿಕಿಪೀಡಿಯದಲ್ಲಿ ಕಂಡಂತೆ ಇದರ ವಿವರಣೆ ಹೀಗಿದೆ - Secularism is the principle of separation of government institutions, and the persons mandated to represent the State, from religious institutions and religious dignitaries. ಆದರೆ ನಮ್ಮಲ್ಲಿನ ವ್ಯವಸ್ಥೆಯನ್ನು ಗಮನಿಸಿದರೆ ಯಾಕೋ ಈ ವಿವರಣೆ ಹೊಂದಿಕೆಯಾಗುತ್ತಿಲ್ಲ. ನಮ್ಮ ನಾಯಕರ ತಪ್ಪು ಗ್ರಹಿಕೆಯೊ ಅಥವಾ ಅವರ ಅನುಕೂಲಕ್ಕಾಗಿ ಇದನ್ನು ಮಾರ್ಪಾಡು ಮಾಡಿಕೊಂಡಿರುವುದೊ, ಒಟ್ಟಿನಲ್ಲಿ ನಮ್ಮ ಜಾತ್ಯಾತೀತ ವ್ಯವಸ್ಥೆ ಹಳಿ ತಪ್ಪಿದೆ. ಸ್ವಾತಂತ್ರ್ಯೋತ್ತರ ಭಾರತ ಧರ್ಮ, ಮತ ಮತ್ತು ಜಾತಿಯ ನಡುವಿರುವ ವ್ಯತ್ಯಾಸವನ್ನು ತಿಳಿಯುವಲ್ಲಿ ವಿಫಲವಾಗಿದೆ. ’ಧರ್ಮ’ ಎನ್ನುವುದು ಆಂಗ್ಲ ಪದವಾದ ’religion'ಗೆ ಸಮಾನಾರ್ಥಕವಾಗಿ ಪ್ರಯೋಗಿಸಲ್ಪಡುತ್ತಿದೆ. ಆದರೆ ಧರ್ಮ ಇದಕ್ಕಿಂತ ವಿಶಾಲವಾದ ಅರ್ಥ ಮತ್ತು ವ್ಯಾಪ್ತಿಯನ್ನು ಹೊಂದಿದೆ. ಧರ್ಮದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ವಿವರಣೆ ಈ ಕೆಳಗಿನಂತಿದೆ -

The English word ‘religion’ does not fully convey the Indian concept of religion. Hindus believe in Vedas. The word ‘Dharma’ has a very wide meaning. One meaning of it is the ‘moral values or ethics’ on which the life is naturally regulated. Dharma or righteousness is elemental and fundamental in all nations, periods and times. For example truth, love, compassion are human virtues. This is what Hindu call Sanatan Dharma meaning religion which is immutable, constant, living permanent and ever in existence. (http://www.ncert.nic.in/html/pdf/schoolcurriculum/ncfsc/judge51_80.pdf)

ಧರ್ಮವು ನಮ್ಮ ಜೀವನ ಪದ್ಧತಿಯನ್ನು ನಿರೂಪಿಸಿದರೆ, ಮತ/ಪಂಗಡವು ಅದರ ಸ್ಥಾಪಕರ ಚಿಂತನೆ/ಆಲೋಚನೆಗಳನ್ನು ಪ್ರತಿನಿಧಿಸುತ್ತದೆ. ಇನ್ನು ಜಾತಿ ಪದ್ಧತಿಯು ವಿವಿಧ ಉದ್ಯೋಗಗಳನ್ನು ನಿರ್ವಹಿಸುವ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸಲು ಹುಟ್ಟಿಕೊಂಡ ವ್ಯವಸ್ಥೆಯಾಗಿದ್ದು ಕಾಲಾಂತರದಲ್ಲಿ ಇದು ಭಿನ್ನ ರೂಪವನ್ನು ಪಡೆದುಕೊಂಡಿತು. ಇತ್ತೀಚಿನ ವರ್ಷಗಳಲ್ಲಂತೂ ಇದು ಜಾತಿ ಸಂಘರ್ಷಕ್ಕೆ ಎಡೆಮಾಡಿದೆ. ಅಲ್ಲದೆ ಜಾತಿ, ಮತ, ಧರ್ಮಗಳನ್ನು ತಮ್ಮ ಲಾಭಕ್ಕಾಗಿ ಬಳಸುತ್ತಿರುವ ರಾಜಕಾರಣಿಗಳು ವ್ಯವಸ್ಥೆಯನ್ನು ಹದಗೆಡಿಸುವುದಕ್ಕೆ ಕೊಟ್ಟ/ಕೊಡುತ್ತಿರುವ ಕೊಡುಗೆ ಗಣನೀಯ! ಇಂದು ಪಂಚಾಯತ್ ಚುನಾವಣೆಯಿಂದ ಹಿಡಿದು ಸಾರ್ವತ್ರಿಕ ಚುನಾವಣೆಯವರೆಗೂ ಅಭ್ಯರ್ಥಿಗಳ ಆಯ್ಕೆ ನಡೆಯುವುದು ಜಾತಿ/ಮತದ ಆಧಾರದಿಂದಲೇ ಹೊರತು ಅರ್ಹತೆಯ ಮಾನದಂಡದಿಂದಲ್ಲ. ಇದು ಪಕ್ಷ ಬೇಧವಿಲ್ಲದೆ ನಡೆಯುತ್ತಿರುವ ಪ್ರಕ್ರಿಯೆ. ಮಾದ್ಯಮವೂ ಈ ವಿಚಾರದಲ್ಲಿ ಎಡವಿದೆ ಎನ್ನುವುದು ಸತ್ಯ. ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಾಗಲೂ ಜಾತಿವಾರು ಪ್ರಾತಿನಿಧ್ಯದ ಬಗ್ಗೆ ಚರ್ಚೆಗಳು ನಡೆಯುತ್ತವೆಯೇ ಹೊರತು ಆಯ್ಕೆಗೊಂಡ ಅಭ್ಯರ್ಥಿಗಳ ಅರ್ಹತೆ, ಸಾಧನೆ ಅಥವಾ ಸಾಧಿಸುವ ಸಾಮರ್ಥ್ಯದ ಬಗೆಗಲ್ಲ. ಹೀಗಾಗಿ ಇಂದಿನ ದಿನಗಳಲ್ಲಿ ಜನನಾಯಕರ ಸಂಖ್ಯೆ ಕ್ಷೀಣಿಸುತ್ತಿದ್ದು ಹೆಚ್ಚಿನ ರಾಜಕಾರಣಿಗಳು ಅವರು ಅನುಸರಿಸುವ ಮತ/ವರ್ಗದ ಪ್ರತಿನಿಧಿಗಳಾಗಿದ್ದಾರೆ. ಸಹಜವಾಗಿ ಅವರು ತಮ್ಮ ವರ್ಗ ಅಥವಾ ತಮ್ಮನ್ನು ಬೆಂಬಲಿಸುತ್ತಿರುವ (ಹಾಗೆಂದು ನಂಬಿರುವ?) ವರ್ಗಕ್ಕೆ ಸಹಾಯ ಮಾಡುವುದರಲ್ಲಿ ತಮ್ಮ ಅಧಿಕಾರಾವಧಿಯನ್ನು ಕಳೆಯುತ್ತಿದ್ದಾರೆ. ಇಂತಹ ರಾಜಕಾರಣಿಗಳು ತಮ್ಮವರಿಗಾಗಿ ಸೃಷ್ಠಿಸಿದ ಮೀಸಲು, ಒಳಮೀಸಲು ಎಂಬ ವಿಷ ವರ್ತುಲದಲ್ಲಿ ಗುಣಮಟ್ಟ, ಸಾಮರ್ಥ್ಯ ಎಂಬಿತ್ಯಾದಿ ಅಂಶಗಳು ಕಳೆದುಹೋಗಿವೆ. ಅಲ್ಲದೆ ಮೀಸಲಾತಿಯ ಸೌಲಭ್ಯವು ಅದಕ್ಕೆ ಅರ್ಹರಾದ, ಸಮಾಜದಲ್ಲಿ ನಿಜಕ್ಕೂ ಶೋಷಣೆಗೊಳಗಾದ ಜನರನ್ನು ತಲುಪಿದೆಯೇ ಎಂಬುದು ಅಧ್ಯಯನ ಯೋಗ್ಯ ವಿಷಯವಾಗಿದೆ. ಒಟ್ಟಿನಲ್ಲಿ ನಮ್ಮ ರಾಜಕೀಯ ಮತ್ತು ಆಡಳಿತದಲ್ಲಿ ಧರ್ಮ ಮಾಯವಾಗಿದ್ದು ಜಾತಿ/ಮತ/ವರ್ಗ ಎಲ್ಲವನ್ನೂ ಆಕ್ರಮಿಸಿದೆ. ಇದರಿಂದಾಗಿ ರಾಜಕೀಯವನ್ನು ಧರ್ಮವಾಗಿ ಸ್ವೀಕರಿಸಿದ ಸಮರ್ಥ ನಾಯಕರೂ ಕೂಡ ಅಸಹಾಯಕರಾಗಿದ್ದಾರೆ. ಇವರ ಕಾಳಜಿ ಯಾರಿಗೂ ಅರ್ಥವಾಗುತ್ತಿಲ್ಲ ಇಲ್ಲವೇ ಪಥ್ಯವಾಗುತ್ತಿಲ್ಲ. ಆದರೂ ಇಂತಹ ಜನನಾಯಕರು ಎದೆಗುಂದಬೇಕಾಗಿಲ್ಲ. ಧರ್ಮೋ ರಕ್ಷತಿ ರಕ್ಷಿತಃ.

(ದಿನಾಂಕ ೨೫.೦೬.೨೦೧೩ರ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)

No comments:

Post a Comment