Sunday, June 2, 2013

ಉಪನ್ಯಾಸಕರಾಗಲು ಯುಜಿಸಿ – ರಾ. ಅರ್ಹತಾ ಪರೀಕ್ಷೆ ಮಾನದಂಡವೇ?


ಸಮಯವನ್ನು ಮೀಟರಿನಲ್ಲಿ ಅಥವಾ ದೂರವನ್ನು ನಿಮಿಷಗಳಲ್ಲಿ ಅಳೆಯುತ್ತೇನೆ ಎಂದರೆ ಆ ವ್ಯಕ್ತಿ ಅಪಹಾಸ್ಯಕ್ಕೀಡಾಗಬಹುದು. ಏಕೆಂದರೆ ಪ್ರತಿಯೊಂದು ಅಂಶವನ್ನು ಅಳೆಯಲು ಅದಕ್ಕೆ ತಕ್ಕುದಾದ ಮಾನವನ್ನು ಮೊದಲೇ ನಿರ್ಧರಿಸಿರುತ್ತೇವೆ. ಆ ಮಾನದಿಂದಲೇ ಆ ಅಂಶವನ್ನು ಅಳೆಯಬೇಕೇ ಹೊರತು ಬೇರೊಂದರಿಂದಲ್ಲ. ಅಲ್ಲದೆ ಮಾನವನ್ನು ನಿರ್ಧರಿಸುವಾಗ ಆ ಅಂಶವನ್ನು ಅದು ಪ್ರತಿನಿಧಿಸುತ್ತದೆಯೋ ಎಂಬುದನ್ನು ಗಮನಿಸಬೇಕಾಗುತ್ತದೆ. ಯಾಕೆ ಇದನ್ನು ಪ್ರಸ್ತಾಪಿಸುತ್ತೀದ್ದೇನೆಂದರೆ, ಪ್ರಸ್ತುತ ನಿಯಮದ ಪ್ರಕಾರ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಉಪನ್ಯಾಸಕರಾಗುವ ಅರ್ಹತೆ ಪಡೆಯಲು, ಆ ವ್ಯಕ್ತಿ ಯುಜಿಸಿ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಅಥವಾ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (ಎಸ್ಎಲ್ಇಟಿ) ಪಾಸಾಗಿರಬೇಕು. ಆಗ ಮಾತ್ರ ಆ ವ್ಯಕ್ತಿ ಉಪನ್ಯಾಸಕ ಹುದ್ದೆಗೆ ಅರ್ಹನಾಗುತ್ತಾನೆ. ಈ ಪರೀಕ್ಷೆಯ ವ್ಯಾಪ್ತಿಯನ್ನು ವಿಶ್ಲೇಷಣೆ ನಡೆಸಿದರೆ ಮೇಲಿನ ಹೇಳಿಕೆಗೆ ಇದು ಅತ್ಯಂತ ಸಮೀಪದಲ್ಲಿದೆ ಎಂದೆನಿಸುತ್ತದೆ. ಏಕೆಂದರೆ ಇದರ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳು ಪರೀಕ್ಷಾರ್ಥಿಯ ವಿಷಯ ಜ್ಞಾನವನ್ನು ಪರೀಕ್ಷಿಸುವಂತಿರುತ್ತವೆಯೇ ಹೊರತು ಆತನ ಬೋಧನಾ ಕೌಶಲವನ್ನು ಅಲ್ಲ. ಅಲ್ಲದೆ ಈ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ನೀಡಿರುವ ಮೀಸಲಾತಿ ಸಮರ್ಥನೀಯವಲ್ಲ. ಒಲಿಂಪಿಕ್ ಕ್ರೀಡಾ ಕೂಟದ ೧೦೦ ಮೀ. ಓಟದಲ್ಲಿ ಹಿಂದುಳಿದ ರಾಷ್ಟ್ರಗಳ ಸ್ಪರ್ಧಾಳುಗಳು ೫೦ ಮೀ. ಮಾತ್ರ ಓಡಿದರೆ ಸಾಕು ಎಂದು ನಿಯಮ ತರುವುದು ಸರಿಯೆ? ಅದಕ್ಕೆ ಬದಲಾಗಿ ಅವರ ತರಬೇತಿಗೆ ವಿಶೇಷ ಧನ ಸಹಾಯ ನೀಡಬಹುದು. ಅದೇ ರೀತಿ ಹಿಂದುಳಿದವರು ಕಲಿಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು ಅವರಿಗೆ ಪರೀಕ್ಷೆಯಲ್ಲಿ ರಿಯಾಯಿತಿ ನೀಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಉಪನ್ಯಾಸಕರಾಗುವ ಅರ್ಹತೆ ಗಳಿಸುವ ದಾರಿಯಲ್ಲಿಯೇ ಇಂತಹ ನ್ಯೂನತೆಗಳಿರಲು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಸಾಧ್ಯವೇ? ಆದುದರಿಂದ ನ್ಯೂನತೆಗಳನ್ನು ಸರಿಪಡಿಸಲು ತಜ್ಞರ ಸಲಹೆ ಪಡೆದು ಸೂಕ್ತ ಮಾರ್ಪಾಡುಗಳನ್ನು ಮಾಡಬೇಕು ಅಥವಾ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಗುಣಮಟ್ಟದ ಉನ್ನತ ಶಿಕ್ಷಣ ಮರೀಚಿಕೆಯಾದೀತು.
(ಈ ಲೇಖನವು ೦೮.೧೨.೨೦೦೪ರ ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)

No comments:

Post a Comment