Friday, February 24, 2012

ಯಡಿಯೂರಪ್ಪನವರಿಗೊಂದು ಬಹಿರಂಗ ಪತ್ರ

 

ಮಾನ್ಯ ಯಡಿಯೂರಪ್ಪನವರೇ,

ಹೊಲಸು ರಾಜಕೀಯದ ಬಗ್ಗೆ ಮಾತನಾಡಬಾರದು ಮತ್ತು ಬರೆಯಬಾರದು ಎಂದು ಎಷ್ಟೋ ಬಾರಿ ತೀರ್ಮಾನಿಸಿದ್ದರೂ ತಮ್ಮ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆ ಮತ್ತು ತಮ್ಮ ವರ್ತನೆಗಳನ್ನು ನೋಡಿದಾಗ ಕೆಲವೊಂದು ಅಂಶಗಳನ್ನು ತಮ್ಮ ಗಮನಕ್ಕೆ ತರಬೇಕೆಂದೆನಿಸಿತು. ಅದಕ್ಕಾಗಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಇದರಲ್ಲಿನ ಯಾವುದೇ ಸಾಲುಗಳು ತಮಗೆ ಬೇಸರ ತರಿಸಿದರೆ ಅದಕ್ಕೊಂದು ಕ್ಷಮೆ ಇರಲಿ.

ನಾನು ಶಾಲಾ ಮೆಟ್ಟಿಲು ಹತ್ತುವ ಮೊದಲೇ ಆರ್ ಎಸ್ ಎಸ್ಶಾಖೆಗೆ ಹೋಗುತ್ತಿದ್ದೆ. ಸಂಘ ನನಗೆ ಶಿಸ್ತು, ಸಮಯಪಾಲನೆ, ಸರಳತೆ, ದೇಶಭಕ್ತಿ ಮುಂತಾದ ಹಲವು ಗುಣಗಳನ್ನು ಜೀವನದಲ್ಲಿ ಅಳವಡಿಸುವಂತೆ ಪ್ರೇರೇಪಿಸಿದೆ. ಅಂತಹ ಸಂಘ ಪರಿವಾರದ ಹಿನ್ನಲೆಯಿಂದ ಬಂದ ತಮ್ಮ ಬಗ್ಗೆ ನನಗೆ ಮೊದಲಿನಿಂದಲೂ ಗೌರವ. ಅಲ್ಲದೆ ತಾವು ಹಿಂದೆ ನಡೆಸಿದ ರೈತ ಪರ ಹೋರಾಟಗಳು ಮತ್ತು ಪಕ್ಷವನ್ನು ಮುನ್ನಡೆಸುತ್ತಿದ್ದ ರೀತಿ ತಮ್ಮ ಬಗ್ಗೆ ನನ್ನಲ್ಲಿ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿತು.ಆದುದರಿಂದಲೇ ತಾವು ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿದಾಗ ಬಹಳ ಸಂಭ್ರಮಪಟ್ಟಿದ್ದೆ ಮತ್ತು ಉತ್ತಮ ಆಡಳಿತವನ್ನೂ ನಿರೀಕ್ಷಿಸಿದ್ದೆ. ಆದರೆ ನನ್ನ ನಿರೀಕ್ಷೆಯ ಗೋಪುರ ಮರಳಿನ ಸೌಧದಂತೆ ಕುಸಿದು ಬಿದ್ದಿದೆ. ಅಧಿಕಾರ ಎಂಬುದು ಒಬ್ಬ ವ್ಯಕ್ತಿಯಲ್ಲಿ ಯಾವ ರೀತಿಯ ಬದಲಾವಣೆಗಳನ್ನು ತರಬಹುದು (ಕೆಡಿಸಬಹುದು?) ಎಂಬುದಕ್ಕೆ ತಾವು ನಿದರ್ಶನವಾದುದು ಒಂದು ದುರಂತ. ಮುಖ್ಯಮಂತ್ರಿ ಪದವಿಗೆ ಹಲವು ಆಕಾಂಕ್ಷಿಗಳಿದ್ದರೂ ನಿಮ್ಮ ಹಿರಿತನ ಮತ್ತು ಸಾಮರ್ಥ್ಯವನ್ನು ಮನಗಂಡು ಪಕ್ಷ ಆ ಜವಾಬ್ದಾರಿಯನ್ನು ತಮಗೆ ನೀಡಿತು. ಆದರೆ ಹೊಣೆಗಾರಿಕೆಯನ್ನರಿತು ಅಡಳಿತ ನಡೆಸುವ ಬದಲಾಗಿ ತಾವು ಅಧಿಕಾರವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿರಿ. ತದನಂತರದ ಬೆಳವಣಿಗೆಗಳು ಮತ್ತು ಅದರ ಪರಿಣಾಮಗಳು ತಮಗೆ ತಿಳಿದೇ ಇದೆ. ಈಗ ಪುನಃ ಅಧಿಕಾರಕ್ಕಾಗಿ ಹೋರಾಟವನ್ನು ಆರಂಭಿಸಿದ್ದೀರಿ. ಈ ಸಂದರ್ಭದಲ್ಲಿ ನಾನು ಕೆಲವೊಂದು ಪ್ರಶ್ನೆಗಳನ್ನು ನಿಮ್ಮ ಮುಂದಿಡುವುದಕ್ಕೆ ಇಷ್ಟಪಡುತ್ತೇನೆ.

  •  ಅಧಿಕಾರ ಉಳಿಸುವ ಧಾವಂತದಲ್ಲಿ ಸಂಘ ಪರಿವಾರದ ಸಿದ್ಧಾಂತವನ್ನು ಮೀರಿ ’ಆಪರೇಷನ್ ಕಮಲ’ ದ ಮೂಲಕ ಬೇರೆ ಪಕ್ಷಗಳ ಶಾಸಕರನ್ನು ವಿವಿಧ ಆಮಿಷಗಳನ್ನು ತೋರಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿರಿ. ನಂತರ ಮಂತ್ರಿ ಪದವಿಗೆ ಅರ್ಹರಾದ ಅನೇಕ ಮಂದಿ ಪಕ್ಷದಲ್ಲಿದ್ದರೂ ವಲಸಿಗರಿಗೆ ಮಂತ್ರಿ ಪದವಿ ನೀಡಿ, ಪಕ್ಷಕ್ಕಾಗಿ ತ್ಯಾಗ ಮಾಡಿ ಎಂದು ಹಿರಿಯ ನಾಯಕರ ಬಾಯಿ ಮುಚ್ಚಿಸಿದ ನೀವು ಈಗ ಮಾಡುತ್ತಿರುವುದಾದರೂ ಏನು?
  •  ಅಷ್ಟಕ್ಕೂ ನೀವು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದುದು ಯಾರಿಂದ? ತಮ್ಮ ಕುಟುಂಬದ ಸದಸ್ಯರಿಗೆ ಅನುಕೂಲ ಮಾಡಿಕೊಡುವ ಮೂಲಕ ತಾವೇ ಸ್ವತಃ ಖೆಡ್ಡಾ ನಿರ್ಮಾಣ ಮಾಡಿಕೊಂಡಿರಿ ಎಂಬುದು ತಮಗೆ ಮರೆತು ಹೋಯಿತೆ?
  •  ಅಂದು ಆರೋಪದ ಕಾರಣ ರಾಜೀನಾಮೆ ನೀಡಿದ ನೀವು ಇಂದು ಆರೋಪ ಮುಕ್ತರಾಗಿದ್ದೀರ? ಹಾಗಿರುವಾಗ ಯಾವ ಆಧಾರದಲ್ಲಿ ನೀವು ಮರಳಿ ಅಧಿಕಾರ ನೀಡಲು ಆಗ್ರಹಿಸುತ್ತೀರಿ?
  •  ಸದಾನಂದ ಗೌಡರನ್ನು ಮುಖ್ಯಮಂತ್ರಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನೀವು ಇಂದು ಅವರ ರಾಜೀನಾಮೆ ಕೇಳುವಂತಹ ತಪ್ಪೇನಾಗಿದೆ?
  •  ತಾವು, ನಾನು ಪ್ರಬಲ ಸಮುದಾಯವೊಂದರ ನಾಯಕ ಮತ್ತು ಆ ಸಮುದಾಯ ದೂರ ಸರಿದರೆ ಪಕ್ಷಕ್ಕೆ ಸೋಲು ಖಚಿತ ಎಂದು ಹೇಳುತ್ತಿರುವುದನ್ನು ಕೇಳಿದ ಮೇಲೂ ನಿಮ್ಮನ್ನು ಜನನಾಯಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ? ಅಷ್ಟಕ್ಕೂ ರಾಜ್ಯ ಮತ್ತು ಪಕ್ಷ ಕೇವಲ ಸಮುದಾಯವೊಂದರ ಆಸ್ತಿಯೇ?
  •  ತಾವು ಪಕ್ಷ ಸಂಘಟನೆಗಾಗಿ ದುಡಿದವರಲ್ಲಿ ಪ್ರಮುಖರು ಎಂಬ ಮಾತ್ರಕ್ಕೆ ಪಕ್ಷ ತನ್ನೊಬ್ಬನ ಆಸ್ತಿ ಎಂಬಂತೆ ವರ್ತಿಸುವುದು ಎಷ್ಟು ಸರಿ?

ದಶಕಗಳ ಜನಪರ ಹೋರಾಟದ ಮೂಲಕ ನಾಯಕರಾಗಿ ರೂಪುಗೊಂಡ ನೀವು ಇಷ್ಟು ಬಾಲಿಶವಾಗಿ ವರ್ತಿಸುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಕೇವಲ ತಮ್ಮ ಸ್ವಾರ್ಥಕ್ಕಾಗಿ ರಾಜ್ಯ ಮತ್ತು ತಾವೇ ಬೆಳೆಸಿದ ಪಕ್ಷವನ್ನು ಬಲಿ ಕೊಡಬೇಡಿ ಎಂಬುದೊಂದೇ ನನ್ನ ಕೋರಿಕೆ.

ಇಂತಿ,

ಮಹೇಶ ಯಂ.ಜಿ.

ಕೆದಿಲ

 

2 comments: