Wednesday, October 11, 2017

ದೀಪಾವಳಿಯನ್ನು ಪಟಾಕಿ ಸದ್ದಿನ ಬದಲಾಗಿ ಹಣತೆಯ ಬೆಳಕಿನೊಂದಿಗೆ ಆಚರಿಸೋಣ

ಹಬ್ಬಗಳ ರಾಜ ಅಥವಾ ಹಬ್ಬಗಳ ಹಬ್ಬ ಎನಿಸಿಕೊಂಡ ದೀಪಾವಳಿ ಸಮೀಪಿಸುತ್ತಿದೆ. ಪ್ರತಿ ವರ್ಷ ನಾವು ಹಲವಾರು ಹಬ್ಬಗಳನ್ನು ಆಚರಿಸುತ್ತಿದ್ದರು ಹಬ್ಬ ಎಂದಾಕ್ಷಣ ನೆನಪಿಗೆ ಬರುವುದು ದೀಪಾವಳಿ. ರಾಮಾಯಣದಲ್ಲೂ ಉಲ್ಲೇಖವಿರುವ ದೀಪಾವಳಿಯ ಸಂಭ್ರಮ ವರ್ಣನಾತೀತ. ಹೊಸ ಬಟ್ಟೆ, ವಿವಿಧ ತಿಂಡಿ ತಿನಿಸುಗಳು, ರಂಗೋಲಿ ಅಲಂಕಾರ, ಹಣತೆಯ ಸಾಲುಗಳು... ಹೀಗೆ ಸಂಭ್ರಮದ ಆಚರಣೆಗೆ ಹಲವು ಕಾರಣಗಳು ಇವೆ. ಇವೆಲ್ಲದರ ಜೊತೆಗೆ ದೀಪಾವಳಿ ಆಚರಣೆಗೆ ಹೊಸ ಮೆರುಗನ್ನು ನೀಡಿದ್ದು ಆಕರ್ಷಣೀಯ ಪಟಾಕಿಗಳು. ವಿವಿಧ ಬಣ್ಣಗಳ ಬೆಳಕಿನ ಚಿತ್ತಾರವನ್ನು ಮೂಡಿಸುವ ಪಟಾಕಿಯ ಬಗ್ಗೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಏನೋ ಆಕರ್ಷಣೆ. ಇತ್ತೀಚಿನ ಕೆಲವು ವರ್ಷಗಳಲ್ಲಂತೂ ದೀಪಾವಳಿ ಆಚರಣೆ ಎಂದರೆ ಪಟಾಕಿ ಸಿಡಿಸುವುದು ಎಂಬ ಭಾವನೆ ಬರುವಷ್ಟು ಹಂತ ತಲುಪಿದೆ ನಮ್ಮ ಪಟಾಕಿ ವ್ಯಾಮೋಹ. ಪಟಾಕಿಯ ಸದ್ದಿನಲ್ಲಿ ದೀಪಾವಳಿಯ ಆಚರಣೆ ಕಳೆದು ಹೋಗಿದೆ ಎಂದರೂ ತಪ್ಪಾಗದು. ಪಟಾಕಿಯ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವುದು ಸತ್ಯವಾದರೂ ಅದರ ಇತರ  ಪರಿಣಾಮಗಳ ಬಗ್ಗೆಯೂ ಯೋಚಿಸುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ಪಟಾಕಿ ಸಿಡಿತದಿಂದ ಪ್ರತಿ ವರ್ಷ ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುವವರು ಹಲವು ಮಂದಿ. ಇನ್ನು ಪಟಾಕಿ ಉಂಟುಮಾಡುವ ಪರಿಸರ ಮಾಲಿನ್ಯವೂ ಗಣನೀಯ. ಇವೆಲ್ಲವನ್ನೂ ಗಮನಿಸಿದಾಗ ಹಬ್ಬದ ಆಚರಣೆಗೆ ಪಟಾಕಿ ಅಗತ್ಯವೇ ಎಂಬ ಪ್ರಶ್ನೆ ಮೂಡುತ್ತದೆ. ಭೂಮಿ,ಗಿಡ, ಮರ, ಪ್ರಾಣಿಗಳಲ್ಲಿಯೂ ದೇವರನ್ನು ಕಾಣುವ ಹಿಂದೂ ಧರ್ಮದ ಪರಿಸರ ಕಾಳಜಿ ಪ್ರಶಂಸನೀಯ . ಸಕಲ ಚರಾಚರ ಗಳಲ್ಲೂ ದೇವರನ್ನು ಕಾಣುವ ನಾವು ಅವುಗಳಿಗೆ ಹಾನಿಯನ್ನು ಉಂಟು ಮಾಡುವುದು ಸರಿಯೇ . ಆದುದರಿಂದ ಸಲದ ದೀಪಾವಳಿಯನ್ನು ಪಟಾಕಿ ಸದ್ದಿನ ಬದಲಾಗಿ ಹಣತೆಯ ಬೆಳಕಿನೊಂದಿಗೆ ಆಚರಿಸೋಣ.

No comments:

Post a Comment