Thursday, November 13, 2014

ಮೋದಿ ಮುಂದಿರುವ ಸವಾಲುಗಳು



ತಿಂಗಳುಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯು ಸ್ವತಃ ತಾನೇ ನಿರೀಕ್ಷಿಸದ ರೀತಿಯ ಅದ್ಭುತ ಸಾಧನೆಯೊಂದಿಗೆ ಅಧಿಕಾರದ ಗದ್ದುಗೆಯನ್ನೇರಿತು. ಇದು ಬಿಜೆಪಿಗಿಂತಲೂ ಅದು ತನ್ನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ನರೇಂದ್ರ ಮೋದಿ ಎಂಬ ವ್ಯಕ್ತಿಯೋರ್ವನ ಗೆಲುವು ಎಂಬುದನ್ನು ಅವರ ವಿರೋಧಿಗಳೂ ಒಪ್ಪಿಕೊಳ್ಳಬೇಕು. ೧೨೦ ಕೋಟಿ ಜನಸಂಖ್ಯೆಯ ಈ ದೇಶ, ವಿವಾದಗಳಿಂದಲೇ ಮಾದ್ಯಮಗಳಲ್ಲಿ ಸುದ್ದಿಯಲ್ಲಿದ್ದ ಮೋದಿಯನ್ನು ಬೆಂಬಲಿಸಿದ್ದು ಯಾವ ಕಾರಣಕ್ಕಾಗಿ ಎಂಬುದು ಬಹಳ ಮುಖ್ಯವಾದ ವಿಷಯ. ೧೦ ವರ್ಷಗಳ ಯುಪಿಎ ದುರಾಡಳಿತದಿಂದ ಬೇಸತ್ತ ಜನತೆ ಬದಲಾವಣೆಗಾಗಿ ಹಾತೊರೆಯುತ್ತಿತ್ತು. ಅದೇ ಸಮಯಕ್ಕೆ ಮೋದಿ ಬಿತ್ತಿದ ಅಭಿವೃದ್ಧಿಯ ಕನಸು ಮರುಭೂಮಿಯಲ್ಲಿನ ಓಯಸಿಸ್ ನಂತೆ ಜನರಲ್ಲಿ ಹೊಸ ಆಶಾ ಭಾನೆಯನ್ನು ಉಂಟುಮಾಡುವಲ್ಲಿ ಯಶಸ್ವಿಯಾಯಿತು. ಮೋದಿಯವರನ್ನು ಅವರ ಪಕ್ಷ, ಅಭಿಮಾನಿಗಳು ಮತ್ತು ಕೊನೆಗೆ ಮಾಧ್ಯಮ ಬಿಂಬಿಸಿದ ರೀತಿ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ಅವರೊಬ್ಬರೇ ದೇಶವನ್ನು ಮುನ್ನಡೆಸಲು ಸಮರ್ಥ ನಾಯಕರು ಎಂಬ ಭಾವನೆ ಸಾರ್ವತ್ರಿಕವಾಗಲು ಕಾರಣವಾಯಿತು. ಅಲ್ಲದೆ ಶತಮಾನದ ಇತಿಹಾಸವಿರುವ ರಾಷ್ಟ್ರೀಯ ಪಕ್ಷವೊಂದು ತನ್ನಲ್ಲಿ ಸಮರ್ಥ ನಾಯಕರಿದ್ದರೂ ಕುಟುಂಬವೊಂದಕ್ಕೆ ಅವರೆಲ್ಲರನ್ನೂ ಒತ್ತೆಯಿಟ್ಟಂತೆ ನಡೆದುಕೊಳ್ಳುವ ಮೂಲಕ ಮೋದಿಯವರಿಗೆ ಪರೋಕ್ಷವಾಗಿ ಸಹಾಯ ಮಾಡಿತು! ಹೀಗೆ ಹಲವಾರು ಕಾರಣಗಳು ಪೂರಕವಾಗಿ ಬೆರೆತು ಮೋದಿಯವರನ್ನು ಪ್ರಧಾನಿ ಹುದ್ದೆಗೆ ಏರಿಸಿತು. ಈಗ ಮೋದಿ ಮುಂದಿರುವ ಸವಾಲೆಂದರೆ ತಾವು ಬಿತ್ತಿದ ಕನಸಿನ ಬೀಜವನ್ನು ಹೆಮ್ಮರವಾಗುವಂತೆ ನೋಡಿಕೊಳ್ಳುವುದು.
ಮೂಲಭೂತ ಸೌಕರ್ಯದಲ್ಲಿನ ಬೆಳವಣಿಗೆಗೆ ಹೆಚ್ಚಿನ ವೇಗ ನೀಡುವುದು  ಮೋದಿಯವರ ಆದ್ಯತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಬೇಕು. ಇನ್ನು ಮೋದಿ ಜನತೆಗೆ ನೀಡಿದ ಬಹು ದೊಡ್ಡ ಭರವಸೆಯೆಂದರೆ ಕಪ್ಪು ಹಣದ ವಾಪಸಾತಿ. ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ ಎಂಬುದು ಮೋದಿ ಸರಕಾರಕ್ಕೆ ಈಗಾಗಲೆ ಮನವರಿಕೆಯಾಗಿದೆ. ಆದರೂ ಪ್ರಾಮಾಣಿಕ ಪ್ರಯತ್ನ ಮಾಡುವೆನೆಂದು ಭರವಸೆ ನೀಡಿರುವ ಮೋದಿ ಈಗ ಮಾತನ್ನು ಉಳಿಸುವುದು ಬಹು ಮುಖ್ಯವಾಗಿದೆ. ಇದರೊಂದಿಗೆ ಸ್ವಚ್ಛ ಭಾರತ, ಎಲ್ಲರ ವಿಕಾಸದಂತಹ ಘೋಷಣೆಗಳನ್ನು ಕಾರ್ಯರೂಪಕ್ಕಿಳಿಸುವಲ್ಲಿ ನೀಲಿನಕ್ಷೆಯನ್ನು ತಯಾರಿಸಿ ಅದಕ್ಕೆ ಬೇಕಾದ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುವ ಹೊಣೆಗಾರಿಕೆ ಹೊಸ ಸರಕಾರದ ಮುಂದಿದೆ. ಇದುವರೆಗಿನ ಮೋದಿಯವರ ಭಾಷಣಗಳು ಕೇವಲ ಕನಸುಗಳನ್ನು ಭಿತ್ತಿವೆಯೇ ಹೊರತು ಅದನ್ನು ಕಾರ್ಯರೂಪಕ್ಕಿಳಿಸುವ ಬಗ್ಗೆ ಸ್ಪಷ್ಟವಾದ ದಾರಿಯನ್ನು ತೋರಿಸಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ರಕ್ಷಣೆ, ಶಿಕ್ಷಣ, ಸಂಶೋಧನೆ, ಆರೋಗ್ಯ, ತೆರಿಗೆ ವ್ಯವಸ್ಥೆ... ಹೀಗೆ ಸುಧಾರಣೆಗೆ ಬಾಕಿಯಿರುವ ಹಲವಾರು ಕ್ಷೇತ್ರಗಳು ಸರಕಾರದ ಮುಂದಿದೆ. ಹಣದುಬ್ಬರ ನಿಯಂತ್ರಣ, ಕಡಿಮೆ ದರದ ಮನೆಸಾಲದಂತಹ ಕ್ರಮಗಳು ಜನಸಾಮಾನ್ಯರನ್ನು ತಕ್ಷಣಕ್ಕೆ ತಲುಪುವಂತಹ ವಲಯಗಳು. ಹಾಗೆಯೇ ಪ್ರತಿಯೊಂದು ಕ್ಷೇತ್ರದಲ್ಲೂ ಪರಿಣಿತರನ್ನು ಪರಿಣಾಮಕಾರಿಯಾಗಿ ಬಳಸಿದರೆ, ಸಂಪನ್ಮೂಲದ ಕ್ರೂಡೀಕರಣ ಮತ್ತು ವಿಂಗಡಣೆಯನ್ನು ವ್ಯವಸ್ಥಿತವಾಗಿ ನಡೆಸಿದರೆ ಮೋದಿಯವರ ಹಾದಿ ಕಠಿಣವಾಗದು. ಜನಸಾಮಾನ್ಯರು ಗುರುತಿಸುವಂತಹ ಬದಲಾವಣೆಗಳನ್ನು ತರುವಲ್ಲಿ ಮೋದಿ ವಿಫಲವಾದರೆ ಅಥವಾ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಉಳಿದರೆ ಅದಕ್ಕೆ ಮೋದಿ ಮತ್ತು ಅವರ ಪಕ್ಷ ಬೆಲೆ ತೆರಬೇಕಾದೀತು. ಜನರ ನಿರೀಕ್ಷೆಗಳು ಅಧಿಕವಾದರೆ ನಿರಾಸೆಯೂ ಕೂಡ ಅದನ್ನು ಹಿಂಬಾಲಿಸುವ ಸಾಧ್ಯತೆಗಳು ಅಧಿಕವಾಗುತ್ತದೆ ಎಂದುದನ್ನು ಮೋದಿಯವರು ಮರೆಯಬಾರದು.

Monday, March 3, 2014

ಎತ್ತಿನಹೊಳೆ ರಾಜಕೀಯ


ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ರಾಜ್ಯದಲ್ಲಿ ಉದ್ಘಾಟನೆ ಮತ್ತು ಶಿಲಾನ್ಯಾಸದ ಭರಾಟೆ ಹೆಚ್ಚುತ್ತಿದೆ. ಈ ಅವಸರ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ದೃಶ್ಯ ಮಾದ್ಯಮಗಳಿಂದ ತಿಳಿದ ಪ್ರಕಾರ ಇತ್ತೀಚೆಗೆ ಉದ್ಘಾಟನೆಗೊಂಡ ಬೆಂಗಳೂರಿನ ಮೆಟ್ರೊ ರೈಲಿನ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.ಚುನಾವಣೆ ಸಮೀಪಿಸುತ್ತಿರುವಾಗ ಈ ತರಹದ ಸಭೆ ಸಮಾರಂಭಗಳನ್ನು ಆಯೋಜಿಸಿ ತಮ್ಮ ಆಡಳಿತಾವಧಿಯಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ ಎಂದು ತೋರಿಸುವುದು ಇದರ ಹಿಂದಿನ ಉದ್ದೇಶ ಎಂಬುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ ಇದು ಪಕ್ಷಾತೀತವಾಗಿ ನಡೆದುಬಂದ ಪರಂಪರೆ. ಮಾರ್ಚ್ ೩ರಂದು ಶಿಲಾನ್ಯಾಸ ನಡೆಸಿದ ಎತ್ತಿನಹೊಳೆ ಯೋಜನೆ ಇಷ್ಟಕ್ಕೇ ಸೀಮಿತವಾಗಿದ್ದರೆ ಈ ಲೇಖನ ಬರೆಯುವ ಅವಶ್ಯಕತೆ ಇರಲಿಲ್ಲ. ಆದರೆ ಇದು ಚುನಾವಣಾ ರಾಜಕೀಯದ ಭಾಗವಾಗಿ, ಪ್ರಕೃತಿಗೆ ವಿರುದ್ಧವಾಗಿ, ಜೈವಿಕ ಸೂಕ್ಷ್ಮತೆಯುಳ್ಳ ಪಶ್ಚಿಮ ಘಟ್ಟದಲ್ಲಿ ಅನುಷ್ಟಾನಗೊಳ್ಳುತ್ತಿರುವ ಯೋಜನೆ. ಪರಿಸರದ ಸಮತೋಲನ ತಪ್ಪಿದರೆ ಸರಿಪಡಿಸಲಾಗದ ಹಾನಿ ಉಂಟಾಗುವ ಅಪಾಯವಿರುವ ಈ ಯೋಜನೆಯನ್ನು ಇಷ್ಟು ತರಾತುರಿಯಲ್ಲಿ ಅನುಷ್ಟಾನಗೊಳಿಸುವ ಅಗತ್ಯವಿದೆಯೇ ಎಂಬುದು ಇಲ್ಲಿಯ ಮೂಲ ಪ್ರಶ್ನೆ. ಜೊತೆಗೆ ಒಂದು ಜಿಲ್ಲೆಗೆ ನೀರು ಒದಗಿಸಲು ಇನ್ನೊಂದು ಜಿಲ್ಲೆಯ ಜನರಿಂದ ಅದನ್ನು ಕಿತ್ತುಕೊಳ್ಳುವುದು ಪರಿಹಾರವೇ?

ಇಂದು ನಮ್ಮಲ್ಲಿ ನೀರಿನ ಅಭಾವವಿದ್ದರೆ ಅದಕ್ಕೆ ನಾವು ಪ್ರಕೃತಿಗೆ ವಿರುದ್ಧವಾಗಿ ಕಾರ್ಯಯೋಜನೆಗಳನ್ನು ಕೈಗೊಂಡುದೇ ಪ್ರಮುಖ ಕಾರಣ. ಅವೈಜ್ಞಾನಿಕ ನಗರೀಕರಣ ಮತ್ತು ಕೈಗಾರೀಕರಣದ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಇನ್ನಾದರೂ ಈ ಸತ್ಯವನ್ನು ಅರಿತು ಪರಿಸರ ಸಹ್ಯವಾದ ಯೋಜನೆಗಳನ್ನು ಜಾರಿಗೆ ತರಬೇಕು. ಇಲ್ಲವಾದರೆ ಹನಿ ನೀರಿಗಾಗಿ ಕಿತ್ತಾಡುವ ದಿನ ದೂರವಿಲ್ಲ. ಕೆರೆಗಳ ಪುನಶ್ಚೇತನ ಕೇವಲ ಹಣ ಪೋಲು ಮಾಡುವ ಮಾರ್ಗವಾಗದೆ ಸರಿಯಾದ ರೀತಿಯಲ್ಲಿ ಕಾರ್ಯಗತವಾಗಬೇಕಿದೆ. ಇದೆಲ್ಲವನ್ನು ಬಿಟ್ಟು ಹರಿವ ನದಿಯ ದಿಕ್ಕನ್ನೇ ಬದಲಾಯಿಸುತ್ತೇನೆ (ಆಧುನಿಕ ಭಗೀರಥರು!) ಎಂದು ಹೊರಟರೆ ಅದು ಅತಿ ಬುದ್ಧಿವಂತಿಕೆಯಾದೀತು. ನದಿ ತಿರುವು ಯೋಜನೆಯನ್ನು ಬೆಂಬಲಿಸುವ ವರ್ಗದ ’ವ್ಯರ್ಥವಾಗಿ ಸಮುದ್ರ ಸೇರುವ ನೀರಿನ ಸದ್ಭಳಕ’ ಎಂಬ ಸಮರ್ಥನೆ ವಿಚಿತ್ರವಾಗಿದೆ. ನದಿಯ ನೀರು ಸಮುದ್ರ ಸೇರುವುದನ್ನು ವ್ಯರ್ಥ ಎನ್ನುವ ಮಂದಿಗೆ ಪರಿಸರ ಶಾಸ್ತ್ರವನ್ನು ಆರಂಭದಿಂದ ಕಲಿಸಬೇಕಿದೆ. ಸಮುದ್ರ ಸೇರುವ ನದಿ ನೀರು ಜಲಚಕ್ರದ ಒಂದು ಭಾಗ ಎಂಬುದು ನಮ್ಮ ಪ್ರಾಥಮಿಕ ಶಾಲಾ ಮಕ್ಕಳಿಗೂ ಗೊತ್ತು. ನಮ್ಮನ್ನಾಳುವ ರಾಜಕಾರಣೆಗಳ ಜ್ಞಾನದ ಮಟ್ಟ ಇದಕ್ಕಿಂತಲೂ ಕೆಳಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಇನ್ನು ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿ ವೇಗದಲ್ಲಿ ಬೆಳೆಯುತ್ತಿದೆ ಮತ್ತು ಬೃಹತ್ ಕೈಗಾರಿಕೆಗಳು ಇಲ್ಲಿ ಆರಂಭವಾಗಿವೆ. ಜೊತೆಗೆ ಮಂಗಳೂರು ಶೈಕ್ಷಣೆಕ ಕೇಂದ್ರವಾಗಿ ಈಗಾಗಲೇ ಗುರುತಿಸಿಕೊಂಡಿದೆ. ಹೀಗಾಗಿ ಮುಂದೆ ನಗರದ ಅಥವಾ ಒಟ್ಟಾರೆಯಾಗಿ ದಕ್ಷಿಣ ಕನ್ನಡದ ನೀರಿನ ಅಗತ್ಯತೆ ಹೆಚ್ಚುತ್ತಾ ಹೋಗುತ್ತದೆ. ಯೋಜನಾ ವರದಿ ತಯಾರಿಸುವಾಗ ಇದನ್ನು ತಜ್ಞರೆನಿಸಿದವರು ಪರಿಗಣಿಸಿದ್ದಾರೆಯೇ? ಅಲ್ಲದೆ ಯೋಜನೆಯ ಜಾರಿಯಿಂದಾಗುವ ಹಾನಿಯನ್ನು ಈ ಸೂಕ್ಷ ಪರಿಸರ ತಾಳಿಕೊಂಡೀತೆ? ಆದುದರಿಂದ ನೀರಿನ ಕೊರತೆ ಅನುಭವಿಸುತ್ತಿರುವ ಜಿಲ್ಲೆಗಳಲ್ಲಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರಕಾರ/ ರಾಜಕೀಯ ನಾಯಕರು ಚಿಂತಿಸಬೇಕಿದೆ. ಇಲ್ಲವಾದಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಈ ಯೋಜನೆಯನ್ನು ಬಳಸಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ಮುಂದಿನ ಚುನಾವಣೆಯಲ್ಲಿ ನಷ್ಟ ಅನುಭವಿಸಿ ನದಿಗೆ ಹಾರವಾದರೆ ಆಶ್ಚರ್ಯವಿಲ್ಲ.

Wednesday, December 11, 2013

ಮಡೆ ಸ್ನಾನ - ಒಂದು ಅಭಿಪ್ರಾಯ


ನಂಬಿಕೆ ಎಂಬುದು ಮಾನವಕುಲದಷ್ಟೇ ಪುರಾತನವಾದುದು. ಎಲ್ಲಾ ಕಾಲದಲ್ಲೂ, ಜಗತ್ತಿನ ಎಲ್ಲಾ ಜನಾಂಗದಲ್ಲೂ, ಎಲ್ಲಾ ಧರ್ಮಗಳಲ್ಲೂ ಅವರದೇ ಆದ ನಂಬಿಕೆಗಳು ಇದ್ದವು ಮತ್ತು ಇಂದು ಕೂಡ ಇವೆ. ನಂಬಿಕೆ ಮತ್ತು ಆಚರಣೆಗಳನ್ನು ಪ್ರಶ್ನಿಸುವ ಗುಂಪು ಸಹ ಅಷ್ಟೇ ಇತಿಹಾಸವನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ, ಆಚರಣೆಗಳಲ್ಲಿ ಅಚಲ ನಂಬಿಕೆಯಿರುವ ಮತ್ತು ಪ್ರತಿಯೊಂದನ್ನೂ ಪ್ರಶ್ನಿಸುವ ಅಥವಾ ವೈಜ್ಞಾನಿಕ ದೃಷ್ಟಿಯಿಂದ ನೋಡುವ ಗುಂಪುಗಳ ಮದ್ಯೆ ಸಂಘರ್ಷ ಸಾಮಾನ್ಯವಾಗಿಬಿಟ್ಟಿದೆ. ’ಮಡೆ ಸ್ನಾನ’ ಇಂತಹ ವಿವಾದಿತ ಆಚರಣೆಗಳಲ್ಲಿ ಒಂದು.

ನನ್ನ ಅಭಿಪ್ರಾಯದ ಪ್ರಕಾರ ’ನಂಬಿಕೆ’ ಎಂಬ ಶಬ್ಧವೇ ತಿಳಿಸುವಂತೆ ಅದು ವೈಜ್ಞಾನಿಕ ಪ್ರಯೋಗ ಅಥವಾ ಅಧ್ಯಯನಗಳ ಮೂಲಕ ಸಾಧಿಸಲಾಗದ ವಿಷಯ. ಹಾಗೇನಾದರೂ ಸಾಧಿಸಲು ಸಾದ್ಯವಾದರೆ ಆಗ ಅದು ’ನಂಬಿಕೆ’ ಎಂಬುದರ ಬದಲು ’ಸತ್ಯ’ ಎಂದು ಕರೆಯಲು ಯೋಗ್ಯವೆನಿಸುತ್ತದೆ. ಆದುದರಿಂದ ಮೊತ್ತ ಮೊದಲನೆಯದಾಗಿ ನಂಬಿಕೆಯನ್ನು ವೈಜ್ಞಾನಿಕತೆಯ ದುರ್ಬೀನಿನಿಂದ ನೋಡುವುದನ್ನು ನಿಲ್ಲಿಸಬೇಕು. ನಂಬಿಕೆಗಳು ಆಯಾ ಪ್ರದೇಶಗಳಲ್ಲಿ ಅಲ್ಲಿನ ಸನ್ನಿವೇಶ ಮತ್ತು ಸಂದರ್ಭಕ್ಕೆ ಸರಿಯಾಗಿ ಹುಟ್ಟಿಕೊಂಡಂತಹುಗಳು. ಆದುದರಿಂದ ಅವು ಸಾರ್ವಕಾಲಿಕ ಅಥವಾ ಸಾರ್ವತ್ರಿಕವಾಗಿರಲು ಸಾಧ್ಯವಿಲ್ಲ. ಹೀಗಾಗಿ ನಂಬಿಕೆಗಳು ಮತ್ತು ಅದಕ್ಕನುಗುಣವಾಗಿ ಹುಟ್ಟಿಕೊಂಡ ಆಚರಣೆಗಳು ಕಾಲಾಂತರದಲ್ಲಿ ಮಾರ್ಪಾಡು ಹೊಂದುವುದು ಇಲ್ಲವೇ ಸನ್ನಿವೇಶ ಮತ್ತು ಸಂದರ್ಭಕ್ಕನುಸಾರವಾಗಿ ಅವುಗಳನ್ನು ಮಾರ್ಪಾಡುಗೊಳಿಸುವುದು ಸರಿಯಾಗಿಯೇ ಇದೆ. ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ಮಡೆ ಸ್ನಾನವನ್ನು ಈ ಮೇಲೆ ವಿವರಿಸಿದ ರೀತಿಯಲ್ಲಿ ನೋಡುತ್ತಿದ್ದರೆ ಅದು ಇಷ್ಟೊಂದು ವಿವಾದದ ವಿಷಯವಾಗುತ್ತಿರಲಿಲ್ಲ. ಅನಾದಿ ಕಾಲದಿಂದ ನಡೆದು ಬಂದ ಆಚರಣೆ ಎಂಬ ಏಕೈಕ ವಾದಕ್ಕೆ ಅಂಟಿಕೊಂಡು, ಅದು ಇಂದಿಗೆ ಪ್ರಸ್ತುತವೇ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ತಯಾರಿರದ ಗುಂಪು ಒಂದು ಕಡೆಯಿದ್ದರೆ, ಇನ್ನು ಅದಕ್ಕೆ ಜಾತಿಯ ಲೇಪನ ಮಾಡಿ ಸಮಾಜದಲ್ಲಿ ಗೊಂದಲ-ಒಡಕು ಮೂಡಿಸುವ ಮೂಲಕ ತಮ್ಮ ಲಾಭಕ್ಕಾಗಿ ಇದನ್ನು ವಿರೋಧಿಸುವ (ಉಪಯೋಗಿಸುವ?) ಗುಂಪು ಇನ್ನೊಂದು ಕಡೆಯಿದೆ. ಇವರನ್ನು ಒಂದೆಡೆ ಸೇರಿಸಿ ಚರ್ಚಿಸುವ ವೇದಿಕೆ ಕಲ್ಪಿಸಲು ಕೆಲವು ಗಣ್ಯರು ಪ್ರಯತ್ನಿಸಿದರೂ ಅದು ನಿರೀಕ್ಷಿತ ಫಲ ನೀಡಲಿಲ್ಲ. ಇನ್ನು ಈ ಪದ್ಧತಿಯನ್ನು ಆಚರಿಸುವ ಮಂದಿ ಯಾರದೋ ಒತ್ತಡಕ್ಕೆ ಇದನ್ನು ಮಾಡುತ್ತಿಲ್ಲ ಮತ್ತು ಅವರಲ್ಲಿ ಎಲ್ಲಾ ಜಾತಿಯ ಮಂದಿಯೂ ಇದ್ದಾರೆ ಎಂಬುದೂ ಗಮನಿಸಬೇಕಾದ ವಿಷಯ. ಈ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ಇದರ ಬಗೆಗಿನ ವಸ್ತುನಿಷ್ಠ ಚಿಂತನೆ ಅಗತ್ಯವೆಂಬುದು ನನ್ನ ಅಭಿಪ್ರಾಯ. ಆಚರಣೆಯ ಇತಿಹಾಸವನ್ನು ಕೆದಕುವುದರ ಬದಲು ಇಂದಿನ ಸಮಾಜ ಮತ್ತು ನಾಗರಿಕತೆಗೆ ಇದು ಪ್ರಸ್ತುತವೋ ಎಂಬ ಪ್ರಶ್ನೆ ಮಹತ್ವದ್ದಾಗಿದೆ. ಅಲ್ಲದೆ ಇದನ್ನು ಕಾನೂನಿನ ಮೂಲಕ ನಿಷೇಧಿಸುವುದರ ಬದಲು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆದಲ್ಲಿ ಹೆಚ್ಚು ಪ್ರಯೋಜನಕಾರಿಯಾಗುವುದರ ಜೊತೆಗೆ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಲು ಸಹಕಾರಿಯಾದೀತು. ಈ ನಿಟ್ಟಿನಲ್ಲಿ ಎರಡೂ ಗುಂಪುಗಳು ಚಿಂತಿಸಲಿ ಎಂಬುದೇ ನನ್ನ ಹಾರೈಕೆ.

Friday, June 21, 2013

ಜಾತಿ, ಧರ್ಮ ಮತ್ತು ರಾಜಕೀಯ

ಬಾಲ್ಯದಿಂದಲೂ ನನ್ನಲ್ಲಿ ಗೊಂದಲ ಮೂಡಿಸಿದ ಪದ ’ಜಾತ್ಯಾತೀತತೆ’ ಅಥವಾ secularism. ಪ್ರಾಥಮಿಕ ಶಾಲಾ ಹಂತದಲ್ಲಿ ನಾವು ಗುರುಗಳಿಂದ ತಿಳಿದ ಪ್ರಕಾರ ಜಾತಿಯನ್ನು ಮೀರಿದ ಸಮಾಜ ಅಥವಾ ರಾಷ್ಟ್ರವನ್ನು ಜಾತ್ಯಾತೀತ ಸಮಾಜ ಅಥವಾ ರಾಷ್ಟ್ರ ಎನ್ನುತ್ತೇವೆ. ಅಂದರೆ ಸಾಮಾಜಿಕ, ಆರ್ಥಿಕ ಅಥವಾ ರಾಜಕೀಯ, ಹೀಗೆ ಎಲ್ಲಾ ಕ್ಷೇತ್ರಗಳನ್ನೂ ಜಾತಿ ವ್ಯವಸ್ಥೆಯಿಂದ ಹೊರಗಿಡುವುದು ಎಂದರ್ಥ. ವಿಕಿಪೀಡಿಯದಲ್ಲಿ ಕಂಡಂತೆ ಇದರ ವಿವರಣೆ ಹೀಗಿದೆ - Secularism is the principle of separation of government institutions, and the persons mandated to represent the State, from religious institutions and religious dignitaries. ಆದರೆ ನಮ್ಮಲ್ಲಿನ ವ್ಯವಸ್ಥೆಯನ್ನು ಗಮನಿಸಿದರೆ ಯಾಕೋ ಈ ವಿವರಣೆ ಹೊಂದಿಕೆಯಾಗುತ್ತಿಲ್ಲ. ನಮ್ಮ ನಾಯಕರ ತಪ್ಪು ಗ್ರಹಿಕೆಯೊ ಅಥವಾ ಅವರ ಅನುಕೂಲಕ್ಕಾಗಿ ಇದನ್ನು ಮಾರ್ಪಾಡು ಮಾಡಿಕೊಂಡಿರುವುದೊ, ಒಟ್ಟಿನಲ್ಲಿ ನಮ್ಮ ಜಾತ್ಯಾತೀತ ವ್ಯವಸ್ಥೆ ಹಳಿ ತಪ್ಪಿದೆ. ಸ್ವಾತಂತ್ರ್ಯೋತ್ತರ ಭಾರತ ಧರ್ಮ, ಮತ ಮತ್ತು ಜಾತಿಯ ನಡುವಿರುವ ವ್ಯತ್ಯಾಸವನ್ನು ತಿಳಿಯುವಲ್ಲಿ ವಿಫಲವಾಗಿದೆ. ’ಧರ್ಮ’ ಎನ್ನುವುದು ಆಂಗ್ಲ ಪದವಾದ ’religion'ಗೆ ಸಮಾನಾರ್ಥಕವಾಗಿ ಪ್ರಯೋಗಿಸಲ್ಪಡುತ್ತಿದೆ. ಆದರೆ ಧರ್ಮ ಇದಕ್ಕಿಂತ ವಿಶಾಲವಾದ ಅರ್ಥ ಮತ್ತು ವ್ಯಾಪ್ತಿಯನ್ನು ಹೊಂದಿದೆ. ಧರ್ಮದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ ವಿವರಣೆ ಈ ಕೆಳಗಿನಂತಿದೆ -

The English word ‘religion’ does not fully convey the Indian concept of religion. Hindus believe in Vedas. The word ‘Dharma’ has a very wide meaning. One meaning of it is the ‘moral values or ethics’ on which the life is naturally regulated. Dharma or righteousness is elemental and fundamental in all nations, periods and times. For example truth, love, compassion are human virtues. This is what Hindu call Sanatan Dharma meaning religion which is immutable, constant, living permanent and ever in existence. (http://www.ncert.nic.in/html/pdf/schoolcurriculum/ncfsc/judge51_80.pdf)

ಧರ್ಮವು ನಮ್ಮ ಜೀವನ ಪದ್ಧತಿಯನ್ನು ನಿರೂಪಿಸಿದರೆ, ಮತ/ಪಂಗಡವು ಅದರ ಸ್ಥಾಪಕರ ಚಿಂತನೆ/ಆಲೋಚನೆಗಳನ್ನು ಪ್ರತಿನಿಧಿಸುತ್ತದೆ. ಇನ್ನು ಜಾತಿ ಪದ್ಧತಿಯು ವಿವಿಧ ಉದ್ಯೋಗಗಳನ್ನು ನಿರ್ವಹಿಸುವ ಸಮಾಜದ ವಿವಿಧ ವರ್ಗಗಳನ್ನು ಪ್ರತಿನಿಧಿಸಲು ಹುಟ್ಟಿಕೊಂಡ ವ್ಯವಸ್ಥೆಯಾಗಿದ್ದು ಕಾಲಾಂತರದಲ್ಲಿ ಇದು ಭಿನ್ನ ರೂಪವನ್ನು ಪಡೆದುಕೊಂಡಿತು. ಇತ್ತೀಚಿನ ವರ್ಷಗಳಲ್ಲಂತೂ ಇದು ಜಾತಿ ಸಂಘರ್ಷಕ್ಕೆ ಎಡೆಮಾಡಿದೆ. ಅಲ್ಲದೆ ಜಾತಿ, ಮತ, ಧರ್ಮಗಳನ್ನು ತಮ್ಮ ಲಾಭಕ್ಕಾಗಿ ಬಳಸುತ್ತಿರುವ ರಾಜಕಾರಣಿಗಳು ವ್ಯವಸ್ಥೆಯನ್ನು ಹದಗೆಡಿಸುವುದಕ್ಕೆ ಕೊಟ್ಟ/ಕೊಡುತ್ತಿರುವ ಕೊಡುಗೆ ಗಣನೀಯ! ಇಂದು ಪಂಚಾಯತ್ ಚುನಾವಣೆಯಿಂದ ಹಿಡಿದು ಸಾರ್ವತ್ರಿಕ ಚುನಾವಣೆಯವರೆಗೂ ಅಭ್ಯರ್ಥಿಗಳ ಆಯ್ಕೆ ನಡೆಯುವುದು ಜಾತಿ/ಮತದ ಆಧಾರದಿಂದಲೇ ಹೊರತು ಅರ್ಹತೆಯ ಮಾನದಂಡದಿಂದಲ್ಲ. ಇದು ಪಕ್ಷ ಬೇಧವಿಲ್ಲದೆ ನಡೆಯುತ್ತಿರುವ ಪ್ರಕ್ರಿಯೆ. ಮಾದ್ಯಮವೂ ಈ ವಿಚಾರದಲ್ಲಿ ಎಡವಿದೆ ಎನ್ನುವುದು ಸತ್ಯ. ಪ್ರತಿಯೊಂದು ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಂಡಾಗಲೂ ಜಾತಿವಾರು ಪ್ರಾತಿನಿಧ್ಯದ ಬಗ್ಗೆ ಚರ್ಚೆಗಳು ನಡೆಯುತ್ತವೆಯೇ ಹೊರತು ಆಯ್ಕೆಗೊಂಡ ಅಭ್ಯರ್ಥಿಗಳ ಅರ್ಹತೆ, ಸಾಧನೆ ಅಥವಾ ಸಾಧಿಸುವ ಸಾಮರ್ಥ್ಯದ ಬಗೆಗಲ್ಲ. ಹೀಗಾಗಿ ಇಂದಿನ ದಿನಗಳಲ್ಲಿ ಜನನಾಯಕರ ಸಂಖ್ಯೆ ಕ್ಷೀಣಿಸುತ್ತಿದ್ದು ಹೆಚ್ಚಿನ ರಾಜಕಾರಣಿಗಳು ಅವರು ಅನುಸರಿಸುವ ಮತ/ವರ್ಗದ ಪ್ರತಿನಿಧಿಗಳಾಗಿದ್ದಾರೆ. ಸಹಜವಾಗಿ ಅವರು ತಮ್ಮ ವರ್ಗ ಅಥವಾ ತಮ್ಮನ್ನು ಬೆಂಬಲಿಸುತ್ತಿರುವ (ಹಾಗೆಂದು ನಂಬಿರುವ?) ವರ್ಗಕ್ಕೆ ಸಹಾಯ ಮಾಡುವುದರಲ್ಲಿ ತಮ್ಮ ಅಧಿಕಾರಾವಧಿಯನ್ನು ಕಳೆಯುತ್ತಿದ್ದಾರೆ. ಇಂತಹ ರಾಜಕಾರಣಿಗಳು ತಮ್ಮವರಿಗಾಗಿ ಸೃಷ್ಠಿಸಿದ ಮೀಸಲು, ಒಳಮೀಸಲು ಎಂಬ ವಿಷ ವರ್ತುಲದಲ್ಲಿ ಗುಣಮಟ್ಟ, ಸಾಮರ್ಥ್ಯ ಎಂಬಿತ್ಯಾದಿ ಅಂಶಗಳು ಕಳೆದುಹೋಗಿವೆ. ಅಲ್ಲದೆ ಮೀಸಲಾತಿಯ ಸೌಲಭ್ಯವು ಅದಕ್ಕೆ ಅರ್ಹರಾದ, ಸಮಾಜದಲ್ಲಿ ನಿಜಕ್ಕೂ ಶೋಷಣೆಗೊಳಗಾದ ಜನರನ್ನು ತಲುಪಿದೆಯೇ ಎಂಬುದು ಅಧ್ಯಯನ ಯೋಗ್ಯ ವಿಷಯವಾಗಿದೆ. ಒಟ್ಟಿನಲ್ಲಿ ನಮ್ಮ ರಾಜಕೀಯ ಮತ್ತು ಆಡಳಿತದಲ್ಲಿ ಧರ್ಮ ಮಾಯವಾಗಿದ್ದು ಜಾತಿ/ಮತ/ವರ್ಗ ಎಲ್ಲವನ್ನೂ ಆಕ್ರಮಿಸಿದೆ. ಇದರಿಂದಾಗಿ ರಾಜಕೀಯವನ್ನು ಧರ್ಮವಾಗಿ ಸ್ವೀಕರಿಸಿದ ಸಮರ್ಥ ನಾಯಕರೂ ಕೂಡ ಅಸಹಾಯಕರಾಗಿದ್ದಾರೆ. ಇವರ ಕಾಳಜಿ ಯಾರಿಗೂ ಅರ್ಥವಾಗುತ್ತಿಲ್ಲ ಇಲ್ಲವೇ ಪಥ್ಯವಾಗುತ್ತಿಲ್ಲ. ಆದರೂ ಇಂತಹ ಜನನಾಯಕರು ಎದೆಗುಂದಬೇಕಾಗಿಲ್ಲ. ಧರ್ಮೋ ರಕ್ಷತಿ ರಕ್ಷಿತಃ.

(ದಿನಾಂಕ ೨೫.೦೬.೨೦೧೩ರ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)

Sunday, June 2, 2013

ಉಪನ್ಯಾಸಕರಾಗಲು ಯುಜಿಸಿ – ರಾ. ಅರ್ಹತಾ ಪರೀಕ್ಷೆ ಮಾನದಂಡವೇ?


ಸಮಯವನ್ನು ಮೀಟರಿನಲ್ಲಿ ಅಥವಾ ದೂರವನ್ನು ನಿಮಿಷಗಳಲ್ಲಿ ಅಳೆಯುತ್ತೇನೆ ಎಂದರೆ ಆ ವ್ಯಕ್ತಿ ಅಪಹಾಸ್ಯಕ್ಕೀಡಾಗಬಹುದು. ಏಕೆಂದರೆ ಪ್ರತಿಯೊಂದು ಅಂಶವನ್ನು ಅಳೆಯಲು ಅದಕ್ಕೆ ತಕ್ಕುದಾದ ಮಾನವನ್ನು ಮೊದಲೇ ನಿರ್ಧರಿಸಿರುತ್ತೇವೆ. ಆ ಮಾನದಿಂದಲೇ ಆ ಅಂಶವನ್ನು ಅಳೆಯಬೇಕೇ ಹೊರತು ಬೇರೊಂದರಿಂದಲ್ಲ. ಅಲ್ಲದೆ ಮಾನವನ್ನು ನಿರ್ಧರಿಸುವಾಗ ಆ ಅಂಶವನ್ನು ಅದು ಪ್ರತಿನಿಧಿಸುತ್ತದೆಯೋ ಎಂಬುದನ್ನು ಗಮನಿಸಬೇಕಾಗುತ್ತದೆ. ಯಾಕೆ ಇದನ್ನು ಪ್ರಸ್ತಾಪಿಸುತ್ತೀದ್ದೇನೆಂದರೆ, ಪ್ರಸ್ತುತ ನಿಯಮದ ಪ್ರಕಾರ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಉಪನ್ಯಾಸಕರಾಗುವ ಅರ್ಹತೆ ಪಡೆಯಲು, ಆ ವ್ಯಕ್ತಿ ಯುಜಿಸಿ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್ಇಟಿ) ಅಥವಾ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆ (ಎಸ್ಎಲ್ಇಟಿ) ಪಾಸಾಗಿರಬೇಕು. ಆಗ ಮಾತ್ರ ಆ ವ್ಯಕ್ತಿ ಉಪನ್ಯಾಸಕ ಹುದ್ದೆಗೆ ಅರ್ಹನಾಗುತ್ತಾನೆ. ಈ ಪರೀಕ್ಷೆಯ ವ್ಯಾಪ್ತಿಯನ್ನು ವಿಶ್ಲೇಷಣೆ ನಡೆಸಿದರೆ ಮೇಲಿನ ಹೇಳಿಕೆಗೆ ಇದು ಅತ್ಯಂತ ಸಮೀಪದಲ್ಲಿದೆ ಎಂದೆನಿಸುತ್ತದೆ. ಏಕೆಂದರೆ ಇದರ ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆಗಳು ಪರೀಕ್ಷಾರ್ಥಿಯ ವಿಷಯ ಜ್ಞಾನವನ್ನು ಪರೀಕ್ಷಿಸುವಂತಿರುತ್ತವೆಯೇ ಹೊರತು ಆತನ ಬೋಧನಾ ಕೌಶಲವನ್ನು ಅಲ್ಲ. ಅಲ್ಲದೆ ಈ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ/ಪಂಗಡಗಳಿಗೆ ನೀಡಿರುವ ಮೀಸಲಾತಿ ಸಮರ್ಥನೀಯವಲ್ಲ. ಒಲಿಂಪಿಕ್ ಕ್ರೀಡಾ ಕೂಟದ ೧೦೦ ಮೀ. ಓಟದಲ್ಲಿ ಹಿಂದುಳಿದ ರಾಷ್ಟ್ರಗಳ ಸ್ಪರ್ಧಾಳುಗಳು ೫೦ ಮೀ. ಮಾತ್ರ ಓಡಿದರೆ ಸಾಕು ಎಂದು ನಿಯಮ ತರುವುದು ಸರಿಯೆ? ಅದಕ್ಕೆ ಬದಲಾಗಿ ಅವರ ತರಬೇತಿಗೆ ವಿಶೇಷ ಧನ ಸಹಾಯ ನೀಡಬಹುದು. ಅದೇ ರೀತಿ ಹಿಂದುಳಿದವರು ಕಲಿಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕೆ ಹೊರತು ಅವರಿಗೆ ಪರೀಕ್ಷೆಯಲ್ಲಿ ರಿಯಾಯಿತಿ ನೀಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಉಪನ್ಯಾಸಕರಾಗುವ ಅರ್ಹತೆ ಗಳಿಸುವ ದಾರಿಯಲ್ಲಿಯೇ ಇಂತಹ ನ್ಯೂನತೆಗಳಿರಲು ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಸಾಧ್ಯವೇ? ಆದುದರಿಂದ ನ್ಯೂನತೆಗಳನ್ನು ಸರಿಪಡಿಸಲು ತಜ್ಞರ ಸಲಹೆ ಪಡೆದು ಸೂಕ್ತ ಮಾರ್ಪಾಡುಗಳನ್ನು ಮಾಡಬೇಕು ಅಥವಾ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಗುಣಮಟ್ಟದ ಉನ್ನತ ಶಿಕ್ಷಣ ಮರೀಚಿಕೆಯಾದೀತು.
(ಈ ಲೇಖನವು ೦೮.೧೨.೨೦೦೪ರ ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿದೆ)