Saturday, May 16, 2026

ಮೂರನೇ ಭಾಷೆ: ಒತ್ತಡ ಕಡಿತವೇ ಅಥವಾ ಗೊಂದಲ ಸೃಷ್ಟಿಯೇ?

ಇತ್ತೀಚೆಗೆ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ “ಮೂರನೇ ಭಾಷೆಯ ಅಂಕಗಳನ್ನು ಪರಿಗಣಿಸದೆ, ಕೇವಲ ಗ್ರೇಡ್ ಮಾತ್ರ ನೀಡುವುದು” ಎಂಬ ನಿರ್ಧಾರ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದ ಉದ್ದೇಶ “ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡುವುದು” ಎಂದು ಹೇಳಲಾಗುತ್ತಿದೆ. ಆದರೆ, ಪರೀಕ್ಷೆಗೆ ಕೇವಲ ಕೆಲವು ದಿನಗಳು ಬಾಕಿ ಇರುವಾಗ ಇಂತಹ ಘೋಷಣೆ ಮಾಡುವುದು ನಿಜವಾಗಿಯೂ ವಿದ್ಯಾರ್ಥಿಗಳಿಗೆ ಉಪಕಾರವಾಗುತ್ತದೆಯೇ ಎಂಬ ಪ್ರಶ್ನೆ ಗಂಭೀರವಾಗಿ ಉದ್ಭವಿಸುತ್ತದೆ.

ಮೊದಲು, ಸಮಯದ ಪ್ರಶ್ನೆ. ವಿದ್ಯಾರ್ಥಿಗಳು ಒಂದು ವರ್ಷದವರೆಗೆ ಮೂರನೇ ಭಾಷೆಯನ್ನು ಅಂಕಗಳ ದೃಷ್ಟಿಯಿಂದಲೇ ಓದಿರುತ್ತಾರೆ. ಅವರು ತಮ್ಮ ಸಮಯ, ಶ್ರಮ, ಯೋಜನೆಗಳನ್ನು ಅದಕ್ಕೆ ಅನುಗುಣವಾಗಿ ಹಂಚಿಕೊಂಡಿರುತ್ತಾರೆ. ಪರೀಕ್ಷೆಗೆ ಕೆಲವೇ ದಿನಗಳ ಮುನ್ನ ನಿಯಮ ಬದಲಿಸುವುದು ಅವರ ತಯಾರಿಯನ್ನು ಅಸ್ಪಷ್ಟಗೊಳಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದಕ್ಕಿಂತ, ಗೊಂದಲವನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಆದ್ದರಿಂದ, ಈ ನಿರ್ಧಾರವು “ಶೈಕ್ಷಣಿಕ ಸುಧಾರಣೆ”ಗಿಂತ “ತುರ್ತು ಆಡಳಿತಾತ್ಮಕ ಕ್ರಮ” ಅಥವಾ “ರಾಜಕೀಯ ನಿರ್ಧಾರ” ಎಂಬ ಅನುಮಾನ ಮೂಡುವುದು ಸಹಜ. ಎರಡನೆಯದಾಗಿ, ಶಿಕ್ಷಣ ಕ್ಷೇತ್ರದ ಸುಧಾರಣೆಯಂತ ಪ್ರಮುಖ ನಿರ್ಧಾರಗಳು ತಜ್ಞರ ಜೊತೆಗಿನ ಚರ್ಚೆಯ ಮೇಲೆ ಆಧಾರಿತವಾಗಿರಬೇಕು. ಶಿಕ್ಷಣತಜ್ಞರು, ಶಿಕ್ಷಕರು, ಮನೋವೈಜ್ಞಾನಿಕರು, ಹಾಗೂ ಮೌಲ್ಯಮಾಪನ ತಜ್ಞರ ಸಮಗ್ರ ಚರ್ಚೆಯ ನಂತರವೇ ಬದಲಾವಣೆಗಳನ್ನು ಜಾರಿಗೆ ತರಬೇಕು. ಒಂದು ಮೌಲ್ಯಮಾಪನ ವ್ಯವಸ್ಥೆಯನ್ನು ಬದಲಿಸುವುದು ಸರಳ ಆಡಳಿತಾತ್ಮಕ ನಿರ್ಧಾರವಲ್ಲ — ಅದು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಪ್ರಭಾವಿಸುತ್ತದೆ. ಮುಖ್ಯವಾಗಿ, ಅಂಕಿ-ಅಂಶಗಳ ಆಳವಾದ ಅಧ್ಯಯನ ನಡಯಬೇಕು. ವಿಷಯವಾರು ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ, ಕೇವಲ ತೃತೀಯ ಭಾಷೆಯಲ್ಲಿ ಮಾತ್ರ ಅನುತ್ತೀರ್ಣರಾದ ಕಾರಣದಿಂದ ೧೦ನೇ ತರಗತಿಯನ್ನು ಪೂರ್ಣಗೊಳಿಸದ ವಿದ್ಯಾರ್ಥಿಗಳ ಪ್ರಮಾಣ - ಮುಂತಾದ ಅಂಶಗಳು ಈ ತರಹದ ಬದಲಾವಣೆಗೆ ಪೂರಕವಾದ ಕಾರಣಗಳನ್ನು ಒದಗಿಸುತ್ತವೆ. ಆದರೆ, ಈ ಸಂದರ್ಭದಲ್ಲಿ ಅಂತಹ ಅಧ್ಯಯನಗಳು ನಡೆದಿರುವುದೇ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ. ಒಂದು ವೇಳೆ ನಡೆದಿದ್ದರೆ ಅದನ್ನು ಸಾರ್ವಜನಿಕವಾಗಿ ಹಂಚಿಕೊಂಡರೆ ಗೊಂದಲಗಳ ನಿವಾರಣೆಗೆ ಸಹಾಯವಾಗುತ್ತದೆ.

ಇನ್ನು ಈ ಪ್ರಕ್ರಿಯೆಯಿಂದ ಉಳಿದ ವಿಷಯಗಳ ಅಧ್ಯಯನಕ್ಕೆ ಹೆಚ್ಚಿನ ಸಮಯ ವಿನಿಯೋಗಿಸಬಹುದು ಎಂಬ ವಾದಕ್ಕೆ ಬರೋಣ. ಆದರೆ ಈಗಾಗಲೇ ಪರೀಕ್ಷೆಗಳು ಆರಂಭವಾಗಿದ್ದು, ತೃತೀಯ ಭಾಷೆಯನ್ನು ಅಂಕಗಳ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಈ ಬಾರಿಯ ೧೦ನೇ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ತರುವ ಸಾದ್ಯತೆ ಕಡಿಮೆ. ಹಾಗೆಯೇ, ಗಣಿತದಂತಹ ವಿಷಯಗಳಲ್ಲಿ ತೇರ್ಗಡೆಯ ಪ್ರಮಾಣ ಕಡಿಮೆಯಿರಲು ಓದುವಿಕೆಗೆ ವಿನಿಯೋಗಿಸುವ ಸಮಯದ ಅಭಾವವೇ ಕಾರಣ ಎಂಬುದರ ಬಗ್ಗೆ ಖಚಿತತೆ ಇಲ್ಲ. ವಿಷಯದ ಗ್ರಹಿಸುವಿಕೆಯಲ್ಲಿ ಸಮಸ್ಯೆಯಿದ್ದರೆ ಹೆಚ್ಚಿನ ಸಮಯದ ವಿನಿಯೋಗವೊಂದೇ ಪರಿಹಾರ ನೀಡಿವುದಿಲ್ಲ. ಪೂರಕವಾದ ಕಲಿಕಾ ಕ್ರಮ, ಅದಕ್ಕೆ ಬೇಕಾದ ಸಿದ್ಧತೆಗಳು, ಶಿಕ್ಷಕರಿಗೆ ಈ ನಿಟ್ಟಿನಲ್ಲಿ ತರಬೇತಿ - ಇತ್ಯಾದಿ ಅಂಶಗಳೂ ಫಲಿತಾಂಶ ಸುಧಾರಣೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಇನ್ನೊಂದು ಮುಖ್ಯ ವಿಷಯ — ನಿಜವಾದ ಒತ್ತಡದ ಮೂಲವೇನು? ವಿದ್ಯಾರ್ಥಿಗಳ ಒತ್ತಡಕ್ಕೆ ಮುಖ್ಯ ಕಾರಣ ಅಂಕಪದ್ದತಿ ಮಾತ್ರವಲ್ಲ, ಪ್ರಶ್ನಾಪತ್ರಿಕೆಯ ಸ್ವರೂಪವೂ ಆಗಿದೆ. ನೀಡಿರುವ ಮಾದರಿ ಪ್ರಶ್ನಾಪತ್ರಿಕೆಗಳಲ್ಲಿ (https://kseeb.karnataka.gov.in/QP2026/SSLC2025-26MODEL_QP) ಕಾಣುವಂತೆ, ಬಹುಪಾಲು ಪ್ರಶ್ನೆಗಳು ಪಾಠಪಠ್ಯದ ನೆನಪಿನ ಮೇಲೆ ಅವಲಂಬಿತವಾಗಿವೆ. “ಮನಪಾಠದಿಂದ ಉಲ್ಲೇಖಿಸಿ”, “ವಿವರಿಸಿ…” / “ವಿವರಣೆ ನೀಡಿ…”, “ಯಾರು…?” ಇತ್ಯಾದಿ ಪ್ರಶ್ನೆಗಳು ವಿದ್ಯಾರ್ಥಿಯನ್ನು ಅರ್ಥಮಾಡಿಕೊಳ್ಳುವುದಕ್ಕಿಂತ, ಪಾಠವನ್ನು ಮನಪಾಠ ಮಾಡಲು ಪ್ರೇರೇಪಿಸುತ್ತವೆ. ಇದೇ ಒತ್ತಡದ ಪ್ರಮುಖ ಕಾರಣ. ಪ್ರಮುಖವಾಗಿ, ತೃತೀಯ ಭಾಷೆಯೂ ಸೇರಿದಂತೆ, ಭಾಷಾ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಭಾಷೆಯ ಗ್ರಹಿಕೆ ಮತ್ತು ಬಳಕೆಯ ಮೌಲ್ಯಮಾಪನ ಹೆಚ್ಚು ಅರ್ಥಪೂರ್ಣ. ವಾಸ್ತವವಾಗಿ, ನಿಜವಾದ ಪರಿಹಾರ ಪ್ರಶ್ನಾಪತ್ರಿಕೆಯ ವಿನ್ಯಾಸದಲ್ಲಿದೆ ಮತ್ತು ಈ ಕೆಳಗಿನ ಬದಲಾವಣೆಗಳು ಅಗತ್ಯ ಎನ್ನುವುದು ನನ್ನ ನಿಲುವು.

  • ಅರ್ಥಗ್ರಹಣ (comprehension) ಆಧಾರಿತ ಪ್ರಶ್ನೆಗಳು ಹೆಚ್ಚಿಸಬೇಕು

  • ವಿಶ್ಲೇಷಣಾತ್ಮಕ (analytical) ಮತ್ತು ಅಭಿಪ್ರಾಯಾತ್ಮಕ (opinion-based) ಪ್ರಶ್ನೆಗಳನ್ನು ಸೇರಿಸಬೇಕು

  • ಪಾಠಪಠ್ಯದ ನೇರ ನೆನಪು ಆಧಾರಿತ ಪ್ರಶ್ನೆಗಳನ್ನು ಕಡಿಮೆ ಮಾಡಬೇಕು

  • ಅನ್ವಯಾತ್ಮಕ (application-based) ಪ್ರಶ್ನೆಗಳ ಪ್ರಮಾಣ ಹೆಚ್ಚಿಸಬೇಕು

ಈ ರೀತಿಯ ಬದಲಾವಣೆಗಳು ವಿದ್ಯಾರ್ಥಿಗಳಲ್ಲಿ ವಿಷಯದ ಮೇಲೆ ಆಸಕ್ತಿ, ಚಿಂತನೆ ಮತ್ತು ಸೃಜನಾತ್ಮಕತೆಯನ್ನು ಬೆಳೆಸುತ್ತವೆ. “ಶಿಕ್ಷಣವೆಂದರೆ ಮಾನವನೊಳಗೆ ಈಗಾಗಲೇ ಅಡಕವಾಗಿರುವ ಪರಿಪೂರ್ಣತೆಯ ಅಭಿವ್ಯಕ್ತಿ.” ಎನ್ನುವ ಸ್ವಾಮಿ ವಿವೇಕಾನಂದರ ಪರಿಕಲ್ಪನೆ ಇಲ್ಲಿ ಉಲ್ಲೇಖ-ಯೋಗ್ಯ. ಇದೇ ಶಿಕ್ಷಣದ ನಿಜವಾದ ಉದ್ದೇಶ. ಈ ಹಿನ್ನೆಲೆಯಲ್ಲೇ, ಕೆಲವು ಮೂಲಭೂತ ಪ್ರಶ್ನೆಗಳು ಉದ್ಭವಿಸುತ್ತವೆ: ಒತ್ತಡ ಕಡಿಮೆ ಮಾಡಬೇಕಾದರೆ, ಕೇವಲ ಮೂರನೇ ಭಾಷೆಯ ಅಂಕಗಳನ್ನು ತೆಗೆದುಹಾಕುವುದೇ ಪರಿಹಾರವೇ? ಅಥವಾ ಸಂಪೂರ್ಣ ಮೌಲ್ಯಮಾಪನ ವ್ಯವಸ್ಥೆಯನ್ನೇ ಪರಿಷ್ಕರಿಸಬೇಕೇ? ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ.

ಇನ್ನು, ಈ ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಬದಲಾವಣೆಯು ೧೯೬೦ರ ದಶಕದಲ್ಲಿ ಜಾರಿಗೆ ಬಂದ ತ್ರಿಭಾಷಾ ಸೂತ್ರದಿಂದ ಕರ್ನಾಟಕವು ಹಿಂದೆ ಸರಿಯುವ ಮೊದಲ ಹೆಜ್ಜೆ ಎಂದೂ ವಿಶ್ಲೇಷಿಸಲಾಗುತ್ತಿದೆ. NEP ಮತ್ತು SEPಗಳ ಮೂಲಕ ಈ ಹಿಂದೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ನಡೆದ ತಿಕ್ಕಾಟ ಮತ್ತು ಈಗಿನ ರಾಜ್ಯ ಸರಕಾರ NEPಯಿಂದ ಹೊರಬರುವ ನಿರ್ಧಾರವನ್ನು ಈ ಹಿಂದೆ ತೆಗೆದುಕೊಂಡಿರುವ ಹಿನ್ನಲೆಯಲ್ಲಿ ತರ್ಕಿಸಿದರೆ ಈ ಅನುಮಾನ ಸಹಜವಾಗಿದೆ. ಇದು ಹೌದೇ ಆದಲ್ಲಿ ಇಂತಹ ಮಹತ್ವದ ನಿರ್ಧಾರಗಳು ತಜ್ಞರ ಅಭಿಪ್ರಾಯಗಳ ತಳಹದಿಯಲ್ಲಿ ರೂಪುಗೊಳ್ಳಬೇಕು ಮತ್ತು ಇದರ ಸಾಧಕ - ಬಾಧಕಗಳ ವಿಮರ್ಶೆ ನಡೆಯಬೇಕು. ಆದುದರಿಂದ ಈ ನಿಟ್ಟಿನಲ್ಲಿ ಸರಕಾರದ ನಿಲುವು ಏನು ಎಂಬುದರ ಬಗ್ಗೆ ಸರಕಾರ ಕರ್ನಾಟಕದ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ.

ಬದಲಾವಣೆ ಜಗದ ನಿಯಮ. ತಂತ್ರಜ್ಞಾನ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳೂ ಬದಲಾವಣೆಗೆ ಮೈಯೊಡ್ಡಿವೆ. ಹಾಗಾಗಿ, ಇಂದಿನ ಅಗತ್ಯತೆಗೆ ತಕ್ಕಂತೆ ಕೌಶಲ್ಯಭರಿತ ಮಾನವ ಸಂಪನ್ಮೂಲದ ತಯಾರಿಯೂ ಶಿಕ್ಷಣ ಕ್ಷೇತ್ರದ ಬಹದೊಡ್ಡ ಜವಾಬ್ದಾರಿ. ಆದುದರಿಂದ ಕಾಲಕ್ಕೆ ತಕ್ಕಂತೆ ಶಿಕ್ಷಣ ಕ್ಷೇತ್ರದ ಸುಧಾರಣೆ ಅನಿವಾರ್ಯ ಎನ್ನುವುದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಇದು ಯೋಜನಾಬದ್ಧವಾದ ಪ್ರಕ್ರಿಯೆಯಾಗಿರಬೇಕು. ಪಠ್ಯಕ್ರಮ ಮತ್ತು ಮೌಲ್ಯಮಾಪನ ಕ್ರಮಗಳಲ್ಲಿ ಬದಲಾವಣೆಗೆ ಮುನ್ನ ಸಾಕಷ್ಟು ಪೂರ್ವ ತಯಾರಿಗಳು ಅಗತ್ಯ. ಮುಖ್ಯವಾಗಿ ಶಿಕ್ಷಕರು ಮತ್ತು ಪೋಷಕರ ಅಭಿಪ್ರಾಯ , ಶಿಕ್ಷಣತಜ್ಞರ ಚಿಂತನೆಗಳ ಒಳಗೊಳ್ಳುವಿಕೆ ಅನಿವಾರ್ಯ. ಹೀಗೆ ಸಾಕಷ್ಟು ಚರ್ಚೆ ಮತ್ತು ಚಿಂತನೆಗಳಿಂದ ರೂಪುಗೊಂಡ ಬದಲಾವಣೆಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಘೋಷಿಸಬೇಕು. ಆಗ ಮಾತ್ರ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲೆಗಳು ತಮ್ಮ ತಯಾರಿಯನ್ನು ಅದಕ್ಕೆ ಅನುಗುಣವಾಗಿ ರೂಪಿಸಿಕೊಳ್ಳಲು ಸಮಯ ಸಿಗುತ್ತದೆ. ಹಾಗೆಯೇ ಬದಲಾದ ಮೌಲ್ಯಮಾಪನ ವ್ಯವಸ್ಥೆಗೆ ಅನುಗುಣವಾಗಿ ತರಗತಿಗಳನ್ನು ಹೊಂದಿಸಿಕೊಳ್ಳುವುದು ಸಾದ್ಯವಾಗುತ್ತದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ನಿಯಮ ಬದಲಿಸುವುದು ಶೈಕ್ಷಣಿಕ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ. ಪರೀಕ್ಷಾ ತಯಾರಿ ಎಂದರೆ ಒಂದು ವರ್ಷದ ಶಿಸ್ತುಬದ್ಧ ಪ್ರಕ್ರಿಯೆ. ಅದು ರಾಜಕೀಯ ಪಕ್ಷಗಳು ಚುನಾವಣೆಯನ್ನು ಗೆಲ್ಲಲು ಚುನಾವಣೆಯ ಕೆಲವೇ ದಿನಗಳ ಮುನ್ನ ನಡೆಸುವ ತಯಾರಿಗಿಂತ ಭಿನ್ನ. ಶಿಕ್ಷಣದಲ್ಲಿ ತುರ್ತು ನಿರ್ಧಾರಗಳಿಗೆ ಸ್ಥಳವಿಲ್ಲ. ಇಲ್ಲಿ ಸ್ಥಿರತೆ, ಯೋಜನೆ ಮತ್ತು ಪಾರದರ್ಶಕತೆ ಅತ್ಯಂತ ಮುಖ್ಯ.

ಕೊನೆಯದಾಗಿ, ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಒಳ್ಳೆಯ ಉದ್ದೇಶವೇ ಸರಿ. ಆದರೆ, ಅದು ಸರಿಯಾದ ಸಮಯದಲ್ಲಿ, ತಜ್ಞರ ಸಲಹೆಗಳೊಂದಿಗೆ, ಹಾಗೂ ಮೂಲ ಸಮಸ್ಯೆಯನ್ನು ಗುರಿಯಾಗಿಸಿಕೊಂಡು ಮಾಡಬೇಕಾಗಿದೆ. ಇಲ್ಲವಾದರೆ, ಇಂತಹ ಕ್ರಮಗಳು “ಶೈಕ್ಷಣಿಕ ಸುಧಾರಣೆ” ಎಂದು ಕಾಣಿಸಿಕೊಳ್ಳುವುದಕ್ಕಿಂತ, “ರಾಜಕೀಯ ಅಜೆಂಡಾ” ಎಂಬ ಅನುಮಾನವನ್ನು ಹೆಚ್ಚಿಸುವುದರಲ್ಲಿ ಆಶ್ಚರ್ಯವಿಲ್ಲ.

(ಈ ಲೇಖನವು ಎಪ್ರಿಲ್ ೧, ೨೦೨೬ರ ಉದಯವಾಣಿಯಲ್ಲಿ ಪ್ರಕಟಗೊಂಡಿದೆ

No comments:

Post a Comment